ADVERTISEMENT

ಬೊಮ್ಮನಹಳ್ಳಿ: ಮರಣ ಪ್ರಮಾಣ ತಗ್ಗಿಸುವುದೇ ಗುರಿ

ಕೋವಿಡ್‌ ಕಾರ್ಯಾಚರಣೆ ಬಿರುಸು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2020, 16:06 IST
Last Updated 2 ಆಗಸ್ಟ್ 2020, 16:06 IST
ಬೇಗೂರು ವಾರ್ಡ್‌ನ ವಿಶ್ವಪ್ರಿಯ ಬಡಾವಣೆಯಲ್ಲಿ ಕೋವಿಡ್ ತಪಾಸಣಾ ವಾಹನಗಳಿಗೆ ಶಾಸಕ ಕೃಷ್ಣಪ್ಪ ಭಾನುವಾರ ಚಾಲನೆ ನೀಡಿದರು. ಕೋವಿಡ್ ನೋಡಲ್ ಅಧಿಕಾರಿ ವೆಂಕಟೇಶ್ ಮೂರ್ತಿ, ಜಂಟಿ ಆಯುಕ್ತ ರಾಮಕೃಷ್ಣ, ಪಾಲಿಕೆ ಸದಸ್ಯ ಆಂಜನಪ್ಪ ಇದ್ದಾರೆ
ಬೇಗೂರು ವಾರ್ಡ್‌ನ ವಿಶ್ವಪ್ರಿಯ ಬಡಾವಣೆಯಲ್ಲಿ ಕೋವಿಡ್ ತಪಾಸಣಾ ವಾಹನಗಳಿಗೆ ಶಾಸಕ ಕೃಷ್ಣಪ್ಪ ಭಾನುವಾರ ಚಾಲನೆ ನೀಡಿದರು. ಕೋವಿಡ್ ನೋಡಲ್ ಅಧಿಕಾರಿ ವೆಂಕಟೇಶ್ ಮೂರ್ತಿ, ಜಂಟಿ ಆಯುಕ್ತ ರಾಮಕೃಷ್ಣ, ಪಾಲಿಕೆ ಸದಸ್ಯ ಆಂಜನಪ್ಪ ಇದ್ದಾರೆ   

ಬೊಮ್ಮನಹಳ್ಳಿ: ಕೊರೊನಾ ಸೋಂಕು ಸಮುದಾಯದೊಳಗೆ ನುಸುಳುವುದನ್ನು ತಡೆಗಟ್ಟಲು ಬೊಮ್ಮನಹಳ್ಳಿ ವಲಯದಲ್ಲಿ ಕಾರ್ಯಾಚರಣೆಯನ್ನು ಬಿರುಸುಗೊಳಿಸಲಾಗಿದೆ.

ಸಂಚಾರಿ ಕೋವಿಡ್ ತಪಾಸಣಾ ವಾಹನಗಳಿಗೆ ಭಾನುವಾರ ಚಾಲನೆ ನೀಡಲಾಯಿತು. ಪ್ರತಿ ವಾರ್ಡ್‌ನಲ್ಲಿ ಎರಡು ವಾಹನಗಳು ಜನರಿರುವಲ್ಲಿ ತೆರಳಿ ತಪಾಸಣೆ ನಡೆಸಲಿವೆ. ಇವು ವಲಯದ ಹದಿನಾರು ವಾರ್ಡ್‌ಗಳಲ್ಲೂ ಕಾರ್ಯಾಚರಿಸಲಿವೆ. ಈ ವಾಹನಗಳ ಮೂಲಕ ದಿನಕ್ಕೆ 1,200 ಜನರ ತಪಾಸಣೆ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ.

ಶನಿವಾರ ಹೊಂಗಸಂದ್ರ ವಾರ್ಡ್ ನಲ್ಲಿ 564 ಜನ ತಪಾಸಣೆಗೆ ಒಳಪಟ್ಟವರಲ್ಲಿ 43 ಜನರಿಗೆ ಸೋಂಕು ದೃಢಪಟ್ಟಿದೆ. ಉತ್ತರಹಳ್ಳಿ ವಾರ್ಡ್‌ನಲ್ಲಿ 544 ಜನರನ್ನು ತಪಾಸಣೆ ಮಾಡಲಾಗಿದ್ದು 36 ಸೋಂಕಿತರು ಪತ್ತೆಯಾಗಿದ್ದಾರೆ.

ADVERTISEMENT

‘ಸೋಂಕು ದೃಢಪಟ್ಟ ಸೋಂಕಿತರು ಯಾವುದೇ ರೋಗ ಲಕ್ಷಣಗಳು ಇಲ್ಲದಾಗಿಯೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಆನಂತರ ಹೋಂ ಕ್ವಾರಂಟೈನ್‌ ಮಾಡಲಾಗುತ್ತದೆ. ಸೋಂಕು ಹರಡುವಿಕೆ ತಡೆಯಲು ಇದು ಅನಿವಾರ್ಯ’ ಎಂದು ಬೊಮ್ಮನಹಳ್ಳಿ ಜಂಟಿ ಆಯುಕ್ತ ರಾಮಕೃಷ್ಣ ಮಾಹಿತಿ ನೀಡಿದರು.

‘ಪ್ರತಿ ವಾರ್ಡ್ ನಲ್ಲಿಯೂ ಸ್ವಯಂಸೇವಕ ತಂಡಗಳು ಆರೋಗ್ಯ ತಪಾಸಣೆ ನಡೆಸಲಿದ್ದು, ರೋಗ ಲಕ್ಷಣಗಳು ಕಂಡುಬಂದಲ್ಲಿ ಅಂಥವರ ಕುರಿತು ವಾಕಿಟಾಕಿ ಮೂಲಕ ವಾರ್ ರೂಂಗೆ ಮಾಹಿತಿ ರವಾನೆ ಆಗಲಿದೆ. ಎಲ್ಲ ಹದಿನಾರು ವಾರ್ ರೂಂಗಳ ಮಾಹಿತಿಯನ್ನು ಪ್ರತಿ 2 ಗಂಟೆಗೆ ಒಮ್ಮೆ ಪ್ರಧಾನ ವಾರ್ ರೂಂಗೆ ಮಾಹಿತಿ ರವಾನೆ ಆಗಲಿದೆ’ ಎಂದು ಕೋವಿಡ್ ಉಸ್ತುವಾರಿ ಮಣಿವಣ್ಣನ್ ಹೇಳಿದರು.

‘ಮರಣ ಪ್ರಮಾಣ ತಗ್ಗಿಸುವುದು ನಮ್ಮ ಮೊದಲ ಆದ್ಯತೆ, ಹೀಗಾಗಿ ಸ್ವಯಂ ಸೇವಕರು ತಪಾಸಣೆಗಾಗಿ ಮನೆಗಳ ಬಳಿ ಬಂದಾಗ ಸಾರ್ವಜನಿಕರು ಸಹಕರಿಸಬೇಕು’ ಎಂದು ಶಾಸಕ ಕೃಷ್ಣಪ್ಪ ಹೇಳಿದರು.

ಕೋಡಿಚಿಕ್ಕನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸತೀಶ್ ರೆಡ್ಡಿ ಮೊಬೈಲ್ ತಪಾಸಣಾ ವಾಹನಗಳಿಗೆ ಚಾಲನೆ ನೀಡಿದರು.

‘ವಾರ್ ರೂಂ ಜತೆಗೆ ಕೋವಿಡ್ ಕಮಾಂಡ್ ರೂಂ, ವೈದ್ಯರ ತಂಡ, ಪ್ರಾಥಮಿಕ ಸಂಪರ್ಕಿತರ ಪತ್ತೆ ತಂಡಗಳು ಸಮಾನಾಂತರವಾಗಿ ಕಾರ್ಯಾಚರಣೆ ನಡೆಸಲಿವೆ, ಸೋಂಕು ತಡೆಗಟ್ಟವಲ್ಲಿ ಪರಿಣಾಮಕಾರಿ ಪ್ರಗತಿ ಸಾಧಿಸುವ ವಿಶ್ವಾಸ ಇದೆ’ ಎಂದು ಬೊಮ್ಮನಹಳ್ಳಿ ವಲಯ ಕೋವಿಡ್ ಉಸ್ತುವಾರಿಯಾಗಿರುವ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.