ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಟಿ. ಶ್ಯಾಂಭಟ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷರಾಗಿದ್ದಾಗ ₹ ಎರಡು ಕೋಟಿ ಲಂಚ ಕೇಳಿದ್ದರು ಎಂದು ಆರೋಪಿಸಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಲಾಗಿದೆ.
ಜನತಾದಳ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಸಿದ್ಧರಾಜು ಈ ದೂರು ನೀಡಿದ್ದು, ಅದರ ಜೊತೆ ಕೆಲವು ದೃಶ್ಯಾವಳಿ ಒಳಗೊಂಡ ಸಿ.ಡಿ ನೀಡಿದ್ದಾರೆ. ದೂರನ್ನು ಸ್ವೀಕರಿಸಿರುವ ಎಸಿಬಿ ಪೊಲೀಸರು ಪ್ರಾಥಮಿಕ ತನಿಖೆ ನಡೆಸಲಿದ್ದು, ಸಿ.ಡಿ ಅಸಲಿಯೇ ಎಂದು ಖಚಿತಪಡಿಸಿಕೊಳ್ಳಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವುದಾಗಿ ಮೂಲಗಳು ತಿಳಿಸಿವೆ.
ರೆವಿನ್ಯೂ ಫೈಲ್ಗಳನ್ನು ಕ್ಲಿಯರ್ ಮಾಡಲು ಶ್ಯಾಂಭಟ್, ಎರಡು ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾದ ಸಂಗತಿ ಆ ಸಿ.ಡಿಯಲ್ಲಿದೆ.
ಅದು ನಕಲಿ ಸಿ.ಡಿ: ‘ನನ್ನ ವಿರುದ್ಧ ಎಸಿಬಿಗೆ ದೂರು ನೀಡಿರುವುದಾಗಿ ಟಿ.ವಿಗಳಲ್ಲಿ ಬಂದ ಸುದ್ದಿಯನ್ನು ನೋಡಿದ್ದೇನೆ. ಅಶ್ವತ್ಥಗೌಡ ಎಂಬ ವ್ಯಕ್ತಿ 2014ರಲ್ಲಿ ಕೆಲಸ ಮಾಡಿಸಿಕೊಳ್ಳಲು ನನ್ನ ಬಳಿ ಬಂದಿದ್ದರು. ಅವರು ನನ್ನ ವಿರುದ್ಧ ನಕಲಿ ಸಿ.ಡಿ ಮಾಡಿದ್ದಾರೆ. ಆ ಬಗ್ಗೆ 2014ರ ಡಿಸೆಂಬರ್ನಲ್ಲೇ ಶೇಷಾದ್ರಿಪುರಂ ಪೊಲೀಸರಿಗೆ ದೂರು ನೀಡಿದ್ದೆ’ ಎಂದು ಶ್ಯಾಂಭಟ್ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.