ADVERTISEMENT

ಬೌದ್ಧರಲ್ಲಿ ಪಂಚೇಂದ್ರಿಯ ಅಲ್ಲ, ಆರು ಇಂದ್ರಿಯ: ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 15:41 IST
Last Updated 15 ಜೂನ್ 2025, 15:41 IST
ಸಿ.ಎನ್. ತಿಪ್ಪೇಸ್ವಾಮಿ, ಡಿ. ಶಿವಶಂಕರ್, ಮೂಡ್ನಾಕೂಡು ಚಿನ್ನಸ್ವಾಮಿ, ಮಹಾದೇವಯ್ಯ ಕಲ್ಲಾರೆಪುರ, ನ್ಯಾನಲೋಕ ಭಂತೇಜಿ ಅವರು ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಬುದ್ಧ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ಪ್ರಜಾವಾಣಿ ಚಿತ್ರ
ಸಿ.ಎನ್. ತಿಪ್ಪೇಸ್ವಾಮಿ, ಡಿ. ಶಿವಶಂಕರ್, ಮೂಡ್ನಾಕೂಡು ಚಿನ್ನಸ್ವಾಮಿ, ಮಹಾದೇವಯ್ಯ ಕಲ್ಲಾರೆಪುರ, ನ್ಯಾನಲೋಕ ಭಂತೇಜಿ ಅವರು ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಬುದ್ಧ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮನಸ್ಸಿನ ಬಗ್ಗೆ ಬುದ್ಧ ವಿಮರ್ಶೆ ನಡೆಸಿದಷ್ಟು ಮತ್ಯಾರೂ ನಡೆಸಿಲ್ಲ. ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ ಎಂಬ ಪಂಚೇಂದ್ರಿಯಗಳಷ್ಟೇ ಅಲ್ಲ. ಮನಸ್ಸು ಸೇರಿ ಆರು ಇಂದ್ರಿಯಗಳು ಎಂಬುದನ್ನು ಬೌದ್ಧ ಧರ್ಮ ಹೇಳುತ್ತದೆ’ ಎಂದು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ತಿಳಿಸಿದರು.

ಭಾರತೀಯ ವಿದ್ಯಾರ್ಥಿ ಸಂಘ (ಬಿವಿಎಸ್‌) ಭಾನುವಾರ ಹಮ್ಮಿಕೊಂಡಿದ್ದ ‘ಬುದ್ಧ ಫೆಸ್ಟ್‌–2025’  ಕಾರ್ಯಕ್ರಮದಲ್ಲಿ ಅವರು ಧಮ್ಮೋಪನ್ಯಾಸ ನೀಡಿದರು.

ಬೇರೆ ಧರ್ಮಗಳಲ್ಲಿ ಮನಸ್ಸಿನ ಬಗ್ಗೆ ಪ್ರಸ್ತಾಪಗಳಾಗಿರುತ್ತವೆ. ಆದರೆ, ದೀರ್ಘ ಮತ್ತು ಆಳವಾದ ಚಿಂತನೆಗಳು ಸಿಗುವುದಿಲ್ಲ. ಎಲ್ಲ ಮನೋವಿಜ್ಞಾನಿಗಳು ಹುಟ್ಟುವ ಮೊದಲೇ ಬುದ್ಧ ಮಾತನಾಡಿದ್ದರು. ಧಮ್ಮಪದದ ಮೊದಲ ಗಾಥೆಯೇ ಮನಸ್ಸಿಗೆ ಸಂಬಂಧಿಸಿದ್ದಾಗಿದೆ. ಪಾಶ್ಚಿಮಾತ್ಯ ಮನೋವಿಜ್ಞಾನಿಗಳು ಬುದ್ಧನ ಚಿಂತನೆಗಳನ್ನು ಇಟ್ಟುಕೊಂಡೇ ಮನೋವಿಜ್ಞಾನವನ್ನು ವಿಸ್ತರಿಸುತ್ತಿದ್ದಾರೆ ಎಂದು ತಿಳಿಸಿದರು.

ADVERTISEMENT

ಕಾಯಾನುಪಸ್ಸನ, ವೇದಾನುಪಸ್ಸನ, ಚಿತ್ತಾನುಪಸ್ಸನ, ಧಮ್ಮಾನುಪಸ್ಸನ ಸತಿಪಠಣ ಎಂಬ ನಾಲ್ಕು ಮನೋಮಗ್ನತೆಯ ಕ್ರಮಗಳನ್ನು ಬುದ್ಧ ವಿವರಿಸಿದ್ದಾರೆ. ದೇಹ, ವೇದನೆ, ಚಿತ್ತ ಮತ್ತು ಧಮ್ಮಗಳ ಬಗೆಗಿನ ಭಾವನೆ ಇಲ್ಲವೇ ಸಂವೇದನೆಯನ್ನು ನಾಲ್ಕು ಸತಿಪಠಣಗಳು ತಿಳಿಸಿಕೊಡುತ್ತವೆ. ಒಳ್ಳೆಯದನ್ನು ಪೂರ್ಣವಾಗಿ ತಿಳಿದುಕೊಳ್ಳುವುದು ಮತ್ತು ಅದನ್ನು ಕಾಪಿಟ್ಟುಕೊಳ್ಳುವುದು, ಕೆಟ್ಟದನ್ನು ನಿರಾಕರಿಸುವುದು ಮತ್ತು ಮುಂದೆ ಬಾರದಂತೆ ಎಚ್ಚರವಹಿಸುವುದು ಹೇಗೆ ಎಂಬುದನ್ನು ಅಭಿಧಮ್ಮದಲ್ಲಿ ವಿವರಿಸಿದ್ದಾರೆ ಎಂದರು.

ಮನಸ್ಸು ಯಾವಾಗಲೂ ಭೂತಕಾಲದ ಬಗ್ಗೆ ಇಲ್ಲವೇ ಭವಿಷ್ಯಕಾಲದ ಬಗ್ಗೆಯೇ ಯೋಚಿಸಿರುತ್ತದೆ. ಮನಸ್ಸನ್ನು ವರ್ತಮಾನದಲ್ಲಿರುವಂತೆ ನೋಡಿಕೊಳ್ಳಬೇಕು. ನಾಮ ಮತ್ತು ರೂಪದ ಸಂಯೋಜನೆಯೇ ಮನುಷ್ಯ. ನಾಮ ಅಂದರೆ ಮನಸ್ಸು, ರೂಪ ಅಂದರೆ ದೇಹ ಎಂದರ್ಥ. ಮನುಷ್ಯ ಮತ್ತು ಪ್ರಕೃತಿಯನ್ನು ಹೊಂದಿಸುವ ಪ್ರಕ್ರಿಯೆಯೇ ಧಮ್ಮ. ಯಾವುದೇ ವಸ್ತು ಹೇಗಿದೆಯೋ ಹಾಗೇ ವಿವರಿಸಬೇಕು. ಕಲ್ಪಿಸಿಕೊಂಡು ಬೇರೆ ಹೇಳಬಾರದು ಎಂದು ಬೌದ್ಧಧರ್ಮ ಹೇಳುತ್ತದೆ. ಅದಕ್ಕಾಗಿಯೇ ಬೌದ್ಧಧರ್ಮ ವೈಜ್ಞಾನಿಕ ಧರ್ಮವಾಗಿದೆ ಎಂದು ವಿವರಿಸಿದರು.

ನ್ಯಾನಲೋಕ ಭಂತೇಜಿ ಸಾನ್ನಿಧ್ಯ ವಹಿಸಿದ್ದರು. ಬೌದ್ಧ ಉಪಾಸಕ ಶಿವಲಿಂಗ ಬಿ.ಎನ್‌. ಅಧ್ಯಕ್ಷತೆ ವಹಿಸಿದ್ದರು. ಸ್ಫೂರ್ತಿಧಾಮದ ಅಧ್ಯಕ್ಷ ಎಸ್. ಮರಿಸ್ವಾಮಿ, ಬೌದ್ಧತತ್ವ ಮೀಮಾಂಸಕ ಮಹಾದೇವಯ್ಯ ಕಲ್ಲಾರೆಪುರ, ಬಹುಜನ ಚಳವಳಿ ಹೋರಾಟಗಾರ್ತಿ ಸಿ.ವಿ. ಲಕ್ಷ್ಮೀ, ಲೇಖಕ ಸಿ. ಚಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.