ADVERTISEMENT

ಶಿಥಿಲಾವಸ್ಥೆ ಕಟ್ಟಡ ಸರ್ವೆ: ವರದಿ ಕೇಳಿದ ಮುಖ್ಯ ಆಯುಕ್ತ

ಅಗತ್ಯ ಇರುವ ಕಡೆ ಹೊಸದಾಗಿ ಸರ್ವೆ ನಡೆಸಲು ಆದೇಶ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 17:32 IST
Last Updated 28 ಸೆಪ್ಟೆಂಬರ್ 2021, 17:32 IST
ಗೌರವ್‌ ಗುಪ್ತ
ಗೌರವ್‌ ಗುಪ್ತ   

ಬೆಂಗಳೂರು: ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಬಗ್ಗೆ ಸರ್ವೆ ನಡೆಸಲು ಎಲ್ಲ ವಲಯಗಳ ಜಂಟಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ತಿಳಿಸಿದರು.

‘ಎರಡು ವರ್ಷಗಳ ಹಿಂದೆಯೇ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಸರ್ವೆ ನಡೆಸಲಾಗಿದೆ. ಅದನ್ನು ಆಧರಿಸಿ ಕೈಗೊಂಡಿರುವ ಕ್ರಮಗಳೇನು ಎಂಬುದರ ಕುರಿತು ಎರಡು ದಿನಗಳಲ್ಲಿ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ’ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.

‘ಈ ಹಿಂದೆ ನಡೆಸಿರುವ ಸರ್ವೆ ಆಧರಿಸಿಯೇ ಜನರನ್ನು ಸ್ಥಳಾಂತರ ಮಾಡಬೇಕಿತ್ತು. ಅದು ಆಗಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಂಡು ಅಂಕಿ–ಅಂಶ ಸಹಿತ ವರದಿ ನೀಡಲು ತಿಳಿಸಿದ್ದೇನೆ. ಅಗತ್ಯ ಇರುವ ಕಡೆ ಹೊಸದಾಗಿ ಸರ್ವೆ ನಡೆಯಲಿದೆ’ ಎಂದರು.

ADVERTISEMENT

‘ವಾಸಕ್ಕೆ ಯೋಗ್ಯ ಇಲ್ಲದ ಬೀಳುವ ಸ್ಥಿತಿಯಲ್ಲಿರುವ ಕಟ್ಟಡಗಳಲ್ಲಿ ಜನರು ನೆಲೆಸಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಈ ಸಂಬಂಧ ಜಂಟಿ ಆಯುಕ್ತರ ನೇತೃತ್ವದಲ್ಲಿ ವಲಯವಾರು ಸಮಿತಿ ರಚನೆಯಾಗಲಿದೆ. ವಿಶೇಷವಾಗಿ ದಕ್ಷಿಣ ವಲಯದಲ್ಲಿ ಹೊಸ ಸರ್ವೆಯನ್ನು 30 ದಿನಗಳಲ್ಲಿ ಪೂರ್ಣಗೊಳಿಸಿ ವರದಿ ನೀಡಲು ತಿಳಿಸಲಾಗಿದೆ’ ಎಂದು ಹೇಳಿದರು.

‘ಕಟ್ಟಡ ಮತ್ತು ಅಗ್ನಿ ದುರಂತ ನಡೆದಿರುವ ಸ್ಥಳಗಳಿಗೆ ಮುಖ್ಯ ಆಯುಕ್ತರೇ ಹೋಗಬೇಕಿಲ್ಲ. ವಿಕೇಂದ್ರೀಕರಣ ವ್ಯವಸ್ಥೆ ಇದೆ. ಅವಶ್ಯಕತೆ ಇದೆ ಎನಿಸಿದರೆ ಸ್ಥಳಕ್ಕೆ ಹೋಗುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.