ADVERTISEMENT

ನಾಲ್ಕು ಹೊಸ ಕಾರ್ಮಿಕ ಸಂಹಿತೆ ಜಾರಿಯಿಂದ ಹೊರೆ: ಡಿ.ಪಿ. ದಾನಪ್ಪ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 20:11 IST
Last Updated 28 ನವೆಂಬರ್ 2025, 20:11 IST
ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಡಿಪಿ ದಾನಪ್ಪ
ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಡಿಪಿ ದಾನಪ್ಪ   

ಪೀಣ್ಯ ದಾಸರಹಳ್ಳಿ: ’ಕೇಂದ್ರ ಸರ್ಕಾರವು ಕಾರ್ಮಿಕರ ಜೀವನಮಟ್ಟ ಸುಧಾರಿಸಲು ಜಾರಿಗೆ ತಂದಿರುವ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳಿಂದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ನಿರ್ವಹಣೆಗೆ ಸಮಸ್ಯೆಯಾಗಲಿದೆ’ ಎಂದು ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಪಿ. ದಾನಪ್ಪ ತಿಳಿಸಿದರು.

‘ಈ ನಿಯಮಗಳಡಿ ನೇಮಕಾತಿ ಪತ್ರ, ಪಿಎಫ್, ಇಎಸ್‍ಐ, ವಿಮೆ, ಕನಿಷ್ಠ ವೇತನ, 40 ವರ್ಷ ಮೇಲ್ಪಟ್ಟವರಿಗೆ ಉಚಿತ ಆರೋಗ್ಯ ತಪಾಸಣೆ ಸೇರಿ ಹಲವು ಪ್ರಯೋಜನಗಳನ್ನು ಕಾರ್ಮಿಕರಿಗೆ ನೀಡಬೇಕಾಗುತ್ತದೆ. ಇದರಿಂದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ತೊಂದರೆ ಎದುರಿಸಬೇಕಾಗುತ್ತದೆ' ಎಂದು ಆತಂಕ ವ್ಯಕ್ತಪಡಿಸಿದರು.

‘ಎಲ್ಲ ಉದ್ಯೋಗದಾತರು ಕಡ್ಡಾಯವಾಗಿ ನೇಮಕಾತಿ ಪತ್ರಗಳನ್ನು ನೀಡಬೇಕೆಂಬುದು ಈ ಸಂಹಿತೆಯಲ್ಲಿದೆ. ಆದರೆ ಸಣ್ಣ ಕಂಪನಿಗಳಿಗೆ ನೇಮಕಾತಿ ಪ್ರಮಾಣ ಪತ್ರ ನೀಡುವ ಸೌಲಭ್ಯ ಇರುವುದಿಲ್ಲ. ಗ್ರ್ಯಾಚ್ಯುಟಿ ಕಾಯ್ದೆಯಲ್ಲಿ 5 ವರ್ಷಗಳ ಅವಧಿಯನ್ನು 1 ವರ್ಷಕ್ಕೆ ಇಳಿಸಿರುವುದರಿಂದ ಕಾರ್ಮಿಕರು 1 ವರ್ಷದ ನಂತರ ಅಂತಿಮ ಪಾವತಿಯನ್ನು ಪಡೆದುಕೊಂಡು ಕೆಲಸವನ್ನು ಬದಲಿಸುತ್ತಾ ಹೋಗುತ್ತಾರೆ’ ಎಂದರು.

ADVERTISEMENT

‘ಯಾವುದೇ ಉದ್ಯೋಗವಾದರೂ ಮಹಿಳೆಯರಿಗೆ ರಾತ್ರಿಪಾಳಿ ಕೆಲಸಗಳಿಗೆ ಅವಕಾಶ ಹಾಗೂ ಸೂಕ್ತ ಭದ್ರತೆ ಕಲ್ಪಿಸಬೇಕೆಂದು ನೀತಿ ಸಂಹಿತೆಯಲ್ಲಿ ತಿಳಿಸಿದ್ದು, ಸಣ್ಣ ಕೈಗಾರಿಕೆಗಳಿಗೆ ಇದರ ವೆಚ್ಚವು ಹೊರೆಯಾಗಲಿದೆ. ಐಟಿ, ಬಿಟಿ ಕಂಪನಿಗಳಲ್ಲಿ ಕ್ಯಾಬ್ ಸೌಲಭ್ಯವಿರುತ್ತದೆ. ಆದರೆ ಸಣ್ಣ ಕೈಗಾರಿಕೆಗಳನ್ನು ನಡೆಸುವುದೇ ಕಷ್ಟವಾಗಿರುವಾಗ ಭದ್ರತೆ ಒದಗಿಸುವುದು ಅಸಾಧ್ಯ’ ಎಂದರು.

40 ವರ್ಷ ಮೇಲ್ಪಟ್ಟ ವಯೋಮಾನದ ಎಲ್ಲ ಕೆಲಸಗಾರರಿಗೆ ವಾರ್ಷಿಕ ಉಚಿತ ಆರೋಗ್ಯ ತಪಾಸಣೆ ಮಾಡಿಸಬೇಕು ಎನ್ನುವುದು ಹೊಸ ಕಾರ್ಮಿಕ ಸಂಹಿತೆಯಲ್ಲಿ ಪ್ರಮುಖ ಅಂಶವಾಗಿದೆ. ಈಗಾಗಲೇ ಇಎಸ್‍ಐ ಪಾವತಿಸುವುದಲ್ಲದೇ, ₹ 21 ಸಾವಿರಕ್ಕೂ ಹೆಚ್ಚಿನ ವೇತನ ಪಡೆಯುವ ಉದ್ಯೋಗಿಗಳಿಗೆ ಆರೋಗ್ಯ ತಪಾಸಣೆಯನ್ನು ಪ್ರತಿ ವರ್ಷ ಮಾಡಿಸುವುದು ಕಷ್ಟವಾಗಲಿದೆ’ ಎಂದು ಹೇಳಿದರು.

‘ಈ ಮೊದಲು ಕೆಲಸದ ಅವಧಿ ಮುಗಿದ ನಂತರ ಹೆಚ್ಚುವರಿ ಅವಧಿಗೆ ಒಂದು ದಿನದ ವೇತನವನ್ನು ಭಾಗಿಸಿ, ಒಂದು ಗಂಟೆಗೆ ಅನ್ವಯವಾಗುವ ಮೊತ್ತವನ್ನು ಅಥವಾ ಅದರ 1ನೇ ಅರ್ಧದಷ್ಟನ್ನು ನೀಡಲಾಗುತ್ತಿತ್ತು. ಆದರೆ ಈಗಿನ ಕಾರ್ಮಿಕ ಸಂಹಿತೆಯ ಪ್ರಕಾರ ಒಂದಕ್ಕೆ 2ರಷ್ಟು ಸೇರಿಸಿ ಕೊಡುವುದು ಕೂಡ ಹೊರೆಯಾಗಲಿದೆ’ ಎಂದರು.

‘ಈಗ ಕಾರ್ಮಿಕ ಮನೆಯಿಂದ ಹೊರಟು, ಮತ್ತೆ ಮನೆ ಸೇರುವವರೆಗೆ ಉದ್ಯೋಗದಾತರೇ ಜವಾಬ್ದಾರರಾಗಿರುತ್ತಾರೆ. ಕಾರ್ಮಿಕರು ಕೆಲಸ ಮುಗಿಸಿ ಹೊರಟ ನಂತರ ಅವರ ಬೇಜವಾಬ್ದಾರಿತನದಿಂದ ಅನಾಹುತ ಮಾಡಿಕೊಂಡರೆ ಉದ್ಯೋಗದಾತರನ್ನು ಹೊಣೆ ಮಾಡುವುದು ಸರಿಯಲ್ಲ' ಎಂದು ಹೇಳಿದರು.

ಅನೇಕ ಸಣ್ಣ ಕೈಗಾರಿಕೆಗಳು ನೂತನ ಸಂಹಿತೆಗಳಡಿ ತಕ್ಷಣವೇ ಹೊಂದಿಕೊಳ್ಳಲು ಕಷ್ಠಸಾಧ್ಯ ಇವುಗಳ ಜಾರಿಯಿಂದ ಶಾಸನಬದ್ಧ ಪಾವತಿಗಳು ಹೆಚ್ಚಾಗುತ್ತದೆ.

ಡಿ.ಪಿ. ದಾನಪ್ಪ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.