ಬೆಂಗಳೂರು: ರಹದಾರಿ ಪಡೆಯದೆ ಮತ್ತು ತೆರಿಗೆ ವಂಚಿಸಿ ಕಾರ್ಯಾಚರಣೆ ಮಾಡುತ್ತಿದ್ದ ಎರಡು ಬಸ್ಗಳನ್ನು ಯಶವಂತಪುರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಮುಂಬೈ–ಬೆಂಗಳೂರು ನಡುವೆ ಕಾರ್ಯಚರಣೆ ಮಾಡುತ್ತಿದ್ದ ಧನುಷ್ ಟ್ರಾವೆಲ್ಸ್ ಹೆಸರಿನ ಎಂಎಚ್–50, ಎನ್–9027 ನಂಬರಿನ ಬಸ್ವೊಂದನ್ನು ಸೆ.30ರಂದು ಸಾರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ವಾರ ಕಳೆದರೂ ವಾರಸುದಾರರು ಬಾರದ ಕಾರಣ ಮೋಟಾರು ವಾಹನ ಹಿರಿಯ ನಿರೀಕ್ಷಕ ರಾಜಣ್ಣ ನೇತೃತ್ವದ ತಂಡ ಕಾರ್ಯಾಚರಣೆ ಮುಂದುವರಿಸಿತು. ‘ಎಂಎಚ್–50, ಎನ್–1404 ಸ್ಲೀಪರ್ ಬಸ್ ಅರಮನೆ ಮೈದಾನದಲ್ಲಿ ನಿಂತಿರುವುದು ಪತ್ತೆಯಾಗಿದ್ದು, ಈ ವಾಹನದ ಚಾಸಿ ಸಂಖ್ಯೆ ಮತ್ತು ನೋಂದಣಿ ಸಂಖ್ಯೆ ತಾಳೆಯಾಗದಿರುವುದು ಕಂಡುಬಂದಿದೆ’ ಎಂದು ರಾಜಣ್ಣ ಮಾಹಿತಿ ನೀಡಿದರು.
‘ಒಂದು ವರ್ಷದಿಂದ ಸರ್ಕಾರಕ್ಕೆ ವಂಚಿಸಿ ಕಾರ್ಯಾಚರಣೆ ನಡೆಸುತ್ತಿರುವ ಎರಡೂ ಬಸ್ಗಳನ್ನು ವಶಕ್ಕೆ ಪಡೆಯಲಾಗಿದೆ. ರಹದಾರಿ ಶುಲ್ಕ ಮತ್ತು ತೆರಿಗೆ ಸೇರಿ ತಲಾ ₹6 ಲಕ್ಷ ಸರ್ಕಾರಕ್ಕೆ ಪಾವತಿಯಾಗಬೇಕಿದೆ. ವಾರಸುದಾರರೇ ಬಾರದ ಕಾರಣ ಕಚೇರಿಯ ಆವರಣದಲ್ಲೇ ಎರಡು ಬಸ್ಗಳನ್ನು ನಿಲ್ಲಿಸಲಾಗಿದೆ’ ಎಂದು ಹೇಳಿದರು.
‘ಚಾಸಿ ಮತ್ತು ಎಂಜಿನ್ ನಂಬರ್ಗಳ ಬಗ್ಗೆ ವಾಹನ ತಯಾರಿಕಾ ಕಂಪನಿಗಳ ತಜ್ಞರಿಂದ ನೈಜತೆ ಪರಿಶೀಲನೆ ನಡೆಸಲಾಗುತ್ತಿದೆ. ಸರ್ಕಾರಕ್ಕೆ ಈ ರೀತಿ ವಂಚಿಸಿ ಕಾರ್ಯಚರಣೆ ಮಾಡುತ್ತಿರುವ ಬಸ್ಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.