ಬೆಂಗಳೂರು: ‘ಜಲಮಂಡಳಿಯ ಹಲವು ಜವಾಬ್ದಾರಿಯನ್ನು ಹೊರಗುತ್ತಿಗೆ ಕೊಡುವ ಮೂಲಕ, ಮಂಡಳಿಯನ್ನು ಖಾಸಗೀಕರಣಗೊಳಿಸುವ ಹುನ್ನಾರ ನಡೆಯುತ್ತಿದೆ’ ಎಂದು ಜಲಮಂಡಳಿ ನೌಕರರ ಸಂಘದ ಅಧ್ಯಕ್ಷ ರುದ್ರೇಗೌಡ ದೂರಿದರು.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಲಮಂಡಳಿ ನೌಕರರು ಶನಿವಾರ ಮಂಡಳಿಯ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ‘1,700 ಹೆಚ್ಚುವರಿ ಹುದ್ದೆಗಳು ಬೇಕು ಎಂದು ನಾವು ಬೇಡಿಕೆ ಇಟ್ಟಿದ್ದೆವು. ಆದರೆ, 1,081 ಹುದ್ದೆ ಮಂಜೂರು ಮಾಡಿ, ಉಳಿದ 700 ಹುದ್ದೆಗಳನ್ನು ಹೊರಗುತ್ತಿಗೆ ತೆಗೆದುಕೊಳ್ಳಲಾಗುತ್ತಿದೆ. ಆ ಮೂಲಕ ಕ್ರಮೇಣವಾಗಿ ಮಂಡಳಿಯನ್ನು ಖಾಸಗಿಯವರಿಗೆ ಒದಗಿಸುವ ಚಿಂತನೆ ನಡೆಯುತ್ತಿದೆ’ ಎಂದರು.
‘ಪಂಪ್ಹೌಸ್ ಆಪರೇಟರ್ಗಳು, ಸ್ವಚ್ಛತಾ ಕಾರ್ಮಿಕರು, ಹಿರಿಯ ಫಿಟ್ಟರ್ಗಳಂತಹ ಹುದ್ದೆಗಳನ್ನೂ ಹೊರಗುತ್ತಿಗೆ ತೆಗೆದುಕೊಳ್ಳಲು ಹೇಳಲಾಗುತ್ತಿದೆ. ಇದಲ್ಲದೆ, ಉನ್ನತ ಹುದ್ದೆಗಳನ್ನು ಹೊರಗುತ್ತಿಗೆ ವ್ಯಾಪ್ತಿಗೆ ತರಲಾಗುತ್ತಿದ್ದು, ಹಾಲಿ ಇರುವ ನೌಕರರು ಬಡ್ತಿ ಸೌಲಭ್ಯದಿಂದ ವಂಚಿತರಾಗುವಂತಾಗಿದೆ’ ಎಂದರು.
ನೌಕರರ ವೇತನ ಪರಿಷ್ಕರಿಸುವುದು ಹಾಗೂ 69 ಮುಂಬಡ್ತಿ ಹುದ್ದೆಗಳನ್ನು ಪುನರ್ ಮಂಜೂರು ಮಾಡಬೇಕು ಎಂದು ನೌಕರರು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.