
ಬೆಂಗಳೂರು: ಕೆನರಾ ಬ್ಯಾಂಕ್ ತನ್ನ ಪ್ರಧಾನ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ ಮಾಡಲಾಯಿತು.
ಸಮಾರಂಭ ಉದ್ಘಾಟಿಸಿದ ಸಂಗೀತ ನಿರ್ದೇಶಕ ಹಂಸಲೇಖ, ‘ಕೆನರಾ ಬ್ಯಾಂಕ್ ಕರ್ನಾಟಕದ ಹೃದಯಕ್ಕೆ ಹತ್ತಿರವಾದ ಬ್ಯಾಂಕ್ ಆಗಿದ್ದು, ಲಕ್ಷಾಂತರ ಜನರ ಬದುಕಿನ ಜೀವನಾಡಿಯಾಗಿದೆ. ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದ ಮೂಲಕ ಈ ಬ್ಯಾಂಕ್ ಸಂಗೀತ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದೆ’ ಎಂದು ಅಭಿಪ್ರಾಯಪಟ್ಟರು.
ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ. ಸತ್ಯನಾರಾಯಣ ರಾಜು, ‘ಕನ್ನಡ ಭಾಷೆ ನಮ್ಮೆಲ್ಲರ ಹೆಮ್ಮೆ’ ಎಂದು ಹೇಳಿದರು.
ನಿವೃತ್ತಿಯ ನಂತರವೂ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಗೆ ತಮ್ಮನ್ನು ಅರ್ಪಿಸಿಕೊಂಡಿರುವ ಕೆನರಾ ಬ್ಯಾಂಕ್ನ ನಿವೃತ್ತ ಅಧಿಕಾರಿಗಳಾದ ಗೋಪಾಲಕೃಷ್ಣ ಪೈ, ಎಂ. ವೆಂಕಟೇಶ ಶೇಷಾದ್ರಿ, ಬಿ.ಎನ್. ರಮೇಶ್ ಕುಮಾರ್, ಕೆ.ಎಸ್. ರವೀಂದ್ರನಾಥ್ ಮತ್ತು ಕೆ.ಜಿ. ಸಂಪತ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾದ ಹರ್ದೀಪ್ ಸಿಂಗ್ ಅಹ್ಲುವಾಲಿಯಾ, ಸುನಿಲ್ ಕುಮಾರ್ ಚುಫ್, ಮುಖ್ಯ ಜಾಗೃತ ಅಧಿಕಾರಿ ನವೀನ್ ಕುಮಾರ್ ದಾಸ್ ಮತ್ತು ಹಿರಿಯ ಅಧಿಕಾರಿಗಳಾದ ರಾಮ ನಾಯ್ಕ್, ಆರ್. ರಾಜೇಶ್ ಮತ್ತು ಮೋಹನ್ ಕುಮಾರ್ ಉಪಸ್ಥಿತರಿದ್ದರು.