ADVERTISEMENT

ಪಂಕ್ಚರ್‌ ಪರಿಶೀಲಿಸುತ್ತಿದ್ದಾಗ ಕಾರು ಗುದ್ದಿ ಚಾಲಕ ಸಾವು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 2:15 IST
Last Updated 11 ಡಿಸೆಂಬರ್ 2019, 2:15 IST
   

ಬೆಂಗಳೂರು: ರಸ್ತೆಯಲ್ಲಿ ಪಂಕ್ಚರ್ ಆಗಿ ನಿಂತಿದ್ದ ತಮ್ಮ ಕಾರಿನ ಚಕ್ರವನ್ನು ಪರಿಶೀಲಿಸುತ್ತಿದ್ದ ಸಂದರ್ಭದಲ್ಲೇ ಇನ್ನೊಂದು ಕಾರು ಬಂದು ಗುದ್ದಿದ್ದರಿಂದ ಆನಂದ್ (24) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹೆಬ್ಬಾಳ ಸಂಚಾರ ಠಾಣೆ ವ್ಯಾಪ್ತಿಯ ಕೊಡಿಗೇಹಳ್ಳಿ ಮೇಲ್ಸೇತುವೆಯಲ್ಲಿ ಮಂಗಳವಾರ ಈ ಅವಘಡ ಸಂಭವಿಸಿದೆ.

‘ನಸುಕಿನ 4ರ ಸುಮಾರಿಗೆ ಆನಂದ್‌ ಅವರು ಕಾರು ತೆಗೆದುಕೊಂಡು ದೇವನಹಳ್ಳಿಯತ್ತ ಹೊರಟಿದ್ದರು. ಕೊಡಿಗೇಹಳ್ಳಿ ಮೇಲ್ಸೇತುವೆಯಲ್ಲಿ ಕಾರು ಪಂಕ್ಚರ್ ಆಗಿತ್ತು. ಕಾರು ನಿಲ್ಲಿಸಿ ಕೆಳಗೆ ಇಳಿದಿದ್ದ ಅವರು ಚಕ್ರಗಳ ಪರಿಶೀಲನೆ ನಡೆಸುತ್ತಿದ್ದರು. ಅದೇ ಸಂದರ್ಭದಲ್ಲೇ ಬೆಂಗಳೂರಿನಿಂದ ದೇವನಹಳ್ಳಿ ಕಡೆಗೆ ಹೊರಟಿದ್ದ ಕಾರು ಆನಂದ್ ಅವರಿಗೆ ಗುದ್ದಿತ್ತು. ಅಪಘಾತ ನಡೆಸಿದ ಬಳಿಕ ಕಾರು ಚಾಲಕ ಪರಾರಿಯಾಗಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವದಿಂದ ಆನಂದ್ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಾರಿಹೋಕರು ನೀಡಿದ್ದ ಮಾಹಿತಿಯಂತೆ ಸ್ಥಳಕ್ಕೆ ಹೋಗಿದ್ದ ಸಿಬ್ಬಂದಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ಮಾಡಿಸಿ ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಅವಿವಾಹಿತರಾಗಿದ್ದ ತುರವೇಕೆರೆಯ ಆನಂದ್‌ ವೈಟ್‌ಫೀಲ್ಡ್‌ನಲ್ಲಿ ನೆಲೆಸಿದ್ದರು. ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.