ADVERTISEMENT

ಬಾನೆಟ್ ಮೇಲೆ ಹತ್ತಿದ್ದ ವ್ಯಕ್ತಿಯನ್ನು ಎಳೆದೊಯ್ದು ಕೊಲೆ ಯತ್ನ: ಕಾರು ಚಾಲಕ ಸೆರೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 15:37 IST
Last Updated 12 ಫೆಬ್ರುವರಿ 2026, 15:37 IST
ಸುರೇಶ್ 
ಸುರೇಶ್    

ಬೆಂಗಳೂರು: ಕಾರಿನ ಬಾನೆಟ್‌ ಮೇಲೆ ಹತ್ತಿದ್ದ ಸರಕು ಸಾಗಣೆ ಆಟೊದ ಚಾಲಕನನ್ನು ಎಳೆದೊಯ್ದು ಕೊಲೆಗೆ ಯತ್ನಿಸಿದ್ದ ಪ್ರಕರಣದ ಆರೋಪಿಯನ್ನು ಹಲಸೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಸುರೇಶ್ ಬಂಧಿತ ಆರೋಪಿ.

ತ್ಯಾಗರಾಜನಗರದ ನಿವಾಸಿ ನಂಜುಂಡ ಅವರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ನಂಜುಂಡ ಅವರು ಹೂವಿನ ವ್ಯಾಪಾರದ ಜತೆಗೆ ಆಟೊ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ADVERTISEMENT

‘ತಮ್ಮ ಅಕ್ಕನ ಮಗ ಮನೋಜ್‌ ಜತೆಗೆ ಬುಧವಾರ ಮಧ್ಯಾಹ್ನ ನಂಜುಂಡ ಅವರು ಹೊಸಕೋಟೆಗೆ ತೆರಳಿ ಹೂವು ಖರೀದಿಸಿಕೊಂಡು ನಗರಕ್ಕೆ ವಾಪಸ್ ಬರುತ್ತಿದ್ದರು. ಮನೋಜ್ ಅವರು ಕಾರು ಚಾಲನೆ ಮಾಡುತ್ತಿದ್ದರೆ, ನಂಜುಂಡ ಅವರು ಪಕ್ಕದ ಸೀಟಿನಲ್ಲಿ ಕುಳಿತಿದ್ದರು. ಮಧ್ಯಾಹ್ನ 12.30ರ ಸುಮಾರಿಗೆ ಟ್ರಿನಿಟಿ ಜಂಕ್ಷನ್ ದಾಟಿ, ಜನರಲ್‌ ಕೆ.ಎಸ್‌.ತಿಮ್ಮಯ್ಯ ರಸ್ತೆಯ ಸಿಗ್ನಲ್‌ನತ್ತ ಸರಕು ಸಾಗಣೆಯ ಆಟೊ ತೆರಳುತ್ತಿತ್ತು. ಆಟೊ ಹಿಂದೆಯೇ ಆರೋಪಿ ಸುರೇಶ್ ಅವರು ಕಾರಿನಲ್ಲಿ ಬರುತ್ತಿದ್ದರು. ಕಾರು ಚಾಲಕ ಜೋರಾಗಿ ಹಾರ್ನ್‌ ಮಾಡಿದ್ದರು. ಆಗ ಇಬ್ಬರ ನಡುವೆ ವಾಗ್ವಾದ ನಡೆದಿತ್ತು’ ಎಂದು ಪೊಲೀಸರು ಹೇಳಿದರು.

ಬಾನೆಟ್ ಮೇಲೇರಿದ ವ್ಯಕ್ತಿಯನ್ನು ಎಳೆದೊಯ್ಯುತ್ತಿರುವ ದೃಶ್ಯ 

‘ನಂಜುಂಡ ಅವರು ಆಟೊದಿಂದ ಕೆಳಕ್ಕೆ ಇಳಿದು ಪ್ರಶ್ನಿಸಲು ಮುಂದಾಗಿದ್ದರು. ಸುರೇಶ್ ಅವರು ಕಾರು ನಿಲುಗಡೆ ಮಾಡದೆ ಮುಂದಕ್ಕೆ ಚಲಾಯಿಸಿದ್ದರು. ನಂಜುಂಡ ಅವರು ಬಾನೆಟ್‌ ಏರಿದಾಗ, ಕೊಲ್ಲುವ ಉದ್ದೇಶದಿಂದ ಕಾರನ್ನು ಸಿ.ಬಿ. ಜಂಕ್ಷನ್‌ ಸಿಗ್ನಲ್‌ನಿಂದ ಸಿಎಸ್‌ಸಿ ಸೆಂಟರ್ ಕಾಲೇಜುವರೆಗೂ ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದರು. ಕಾರು ನಿಲುಗಡೆ ಮಾಡುವಂತೆ ಸಾರ್ವಜನಿಕರು ಮನವಿ ಮಾಡಿದರೂ ಸುರೇಶ್ ಅವರು ಸ್ಪಂದಿಸಲಿಲ್ಲ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.