ಬೆಂಗಳೂರು: ಯಲಹಂಕದ ರೈಲ್ವೆ ವ್ಹೀಲ್ ಕಾರ್ಖಾನೆಯಲ್ಲಿ ಹಿರಿಯ ತಂತ್ರಜ್ಞರಾಗಿ ಕೆಲಸ ಮಾಡಿದ್ದ ಎಂ.ಬಸವಲಿಂಗಪ್ಪ ಅವರಿಗೆ ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದ ಆರೋಪದಡಿ 16 ಮಂದಿ ವಿರುದ್ಧ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಕಾರ್ಖಾನೆಯಲ್ಲಿ 33 ವರ್ಷ ಕೆಲಸ ಮಾಡಿದ್ದೆ. ಉತ್ತಮ ಸೇವೆಗಾಗಿ ಪ್ರಶಸ್ತಿಯೂ ಬಂದಿತ್ತು. 2022ರ ಅಕ್ಟೋಬರ್ 19ರಂದು ಪದೋನ್ನತಿ ನೌಕರರ ಪಟ್ಟಿ ಬಂದಿತ್ತು. ಆ ಪಟ್ಟಿಯಲ್ಲಿ ನನ್ನ ಹೆಸರು ಇತ್ತು. ಆಗ, ಯಾವುದೇ ಪದೋನ್ನತಿ ಹಾಗೂ ವೇತನ ಮುಂಬಡ್ತಿ ನೀಡದೇ ಕಾರ್ಖಾನೆಯಿಂದ ಹೊರಕ್ಕೆ ಹಾಕುತ್ತೇವೆ ಎಂದು ಬೆದರಿಸಿದ್ದರು. ಶರ್ಟ್ನ ಕಾಲರ್ ಹಿಡಿದುಕೊಂಡು ಜಾತಿ ನಿಂದನೆ ಮಾಡಿದ್ದರು’ ಎಂದು ಬಸವಲಿಂಗಪ್ಪ ಅವರು ನೀಡಿದ ದೂರು ಆಧರಿಸಿ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
‘ಪದೋನ್ನತಿ ನೀಡದೇ ರೈಲ್ವೆ ಕಾಯ್ದೆ–1989 ಅನ್ನು ಉಲ್ಲಂಘನೆ ಮಾಡಿದ್ದಾರೆ. ಅಲ್ಲದೇ ಕೊಲೆಗೂ ಸಂಚು ರೂಪಿಸಿದ್ದರು’ ಎಂಬುದಾಗಿ ದೂರು ನೀಡಿದ್ದಾರೆ.
‘ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರ, 71ನೇ ಸಿಸಿಎಚ್ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.