ADVERTISEMENT

ರೆಮ್‌ಡಿಸಿವಿರ್ ಮಾರಾಟ; ವಾರದಲ್ಲಿ 40 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 21:43 IST
Last Updated 29 ಏಪ್ರಿಲ್ 2021, 21:43 IST
ರೆಮ್‌ಡಿಸಿವಿರ್ ಇಂಜೆಕ್ಷನ್
ರೆಮ್‌ಡಿಸಿವಿರ್ ಇಂಜೆಕ್ಷನ್   

ಬೆಂಗಳೂರು: ಕೊರೊನಾ ಸೋಂಕಿತರಿಗೆ ನೀಡುವ ‘ರೆಮ್‌ಡಿಸಿವಿರ್’ ಚುಚ್ಚುಮದ್ದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದವರ ವಿರುದ್ಧ ಸಿಸಿಬಿ ಕಾರ್ಯಾಚರಣೆ ಮುಂದುವರಿದಿದ್ದು, ವಾರದಲ್ಲಿ 40 ಆರೋಪಿಗಳನ್ನು ಬಂಧಿಸಲಾಗಿದೆ.

‘ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ರೆಮ್‌ಡಿಸಿವಿರ್ ಚುಚ್ಚುಮದ್ದಿಗೆ ಬೇಡಿಕೆ ಬಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಹಲವರು, ಕಾಳಸಂತೆಯಲ್ಲಿ ದುಬಾರಿಗೆ ಬೆಲೆಗೆ ಚುಚ್ಚುಮದ್ದು ಮಾರಾಟ ಮಾಡುತ್ತಿದ್ದಾರೆ’ ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹೇಳಿದರು.

‘ಚುಚ್ಚುಮದ್ದು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿದ್ದ ಹಾಗೂ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದವರನ್ನು ಕಾರ್ಯಾಚರಣೆ ನಡೆಸಿ ಬಂಧಿಸಲಾಗುತ್ತಿದೆ. ಇದುವರೆಗೂ 40 ಮಂದಿಯನ್ನು ಬಂಧಿಸಲಾಗಿದ್ದು, ಅವರಿಂದ ಒಟ್ಟು 80 ಚುಚ್ಚುಮದ್ದು ಬಾಟಲಿಗಳನ್ನು ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿದರು.

ADVERTISEMENT

‘ಬಂಧಿತರಲ್ಲಿ ಆಯುರ್ವೇದ ವೈದ್ಯ, ಕೆಲವರು ನರ್ಸ್, ಔಷಧಿಮಳಿಗೆ ಮಾಲೀಕರು, ಔಷಧಿ ವಿತರಕರೂ ಇದ್ದಾರೆ. ಎಲ್ಲರ ವಿರುದ್ಧವೂ ಪ್ರತ್ಯೇಕವಾಗಿ ನಗರದ ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದೂ ಅವರು ಹೇಳಿದರು.

ಕಂಪನಿಯಿಂದ ತರಿಸಿ ಮಾರಾಟ: ‘ಕೊರೊನಾ ಸೋಂಕಿತರ ಮಾಹಿತಿ ಸಮೇತ ಬೇಡಿಕೆ ಇರುವುದಾಗಿ ಹೇಳಿ ಆರೋಪಿಗಳು ಕಂಪನಿಯಿಂದ ರೆಮ್‌ಡಿಸಿವಿರ್ ತರಿಸುತ್ತಿದ್ದರು. ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಪ್ರತಿ ಡೋಸ್‌ಗೆ ₹10.000ದಿಂದ ₹11,500ರವರೆಗೂ ಮಾರಾಟ ಮಾರುತ್ತಿದ್ದರು’ ಎಂದೂ ಪಾಟೀಲ ತಿಳಿಸಿದರು.

ಅಂಬೇಡ್ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಕೋವಿಡ್‌ಗೆ ಮೀಸಲು
ಬೆಂಗಳೂರು: ಬಿಬಿಎಂಪಿ ಪೂರ್ವ ವಲಯದ ವ್ಯಾಪ್ತಿಯಲ್ಲಿರುವ ಅಂಬೇಡ್ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ.

ಕೋವಿಡ್ ಸೋಂಕಿತರ ಚಿಕಿತ್ಸೆಗೆ ಸಂಬಂಧಿಸಿದಂತೆ ವಲಯ ಉಸ್ತುವಾರಿಯೂ ಆಗಿರುವ ವಸತಿ ಸಚಿವ ವಿ. ಸೋಮಣ್ಣ ನೇತೃತ್ವದಲ್ಲಿ ಗುರುವಾರ ಸಭೆ ನಡೆಯಿತು. ವಲಯ ವ್ಯಾಪ್ತಿಯ ಎಲ್ಲ ಕ್ಷೇತ್ರಗಳಿಗೆ ತಲಾ 20 ಆಕ್ಸಿಜನ್ ಕಾನ್ಸಂಟ್ರೇಟರ್ ನೀಡಲು ಕೂಡಾ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಅಂಬೇಡ್ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆಕ್ಸಿಜನ್ ಸೌಲಭ್ಯವಿರುವ 175 ಬೆಡ್‌ಗಳು ಚಿಕಿತ್ಸೆಗೆ ಲಭ್ಯವಾಗಲಿದೆ. ಚರಕ ಆಸ್ಪತ್ರೆಯಲ್ಲಿರುವ 28 ಐಸಿಯು ಬೆಡ್‌ಗಳಲ್ಲಿ 10 ಐಸಿಯು ಬೆಡ್‌ಗಳನ್ನು ಕೂಡಾ ಸೋಂಕಿತರಿಗೆ ಮೀಸಲಿಡಲಾಗಿದೆ. ಶಾಂತಿನಗರದಲ್ಲಿ 175 ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ಆರಂಭಗೊಂಡಿದೆ. ಚರ್ಚ್ ಆಫ್ ಸೌತ್ ಇಂಡಿಯಾ ಆಸ್ಪತ್ರೆಯಲ್ಲಿ 100 ಬೆಡ್‌ಗಳ ಸೆಂಟರ್ ಭಾನುವಾರದಿಂದ ಹಾಗೂ ಸಿ.ವಿ ರಾಮನ್ ನಗರ ಎಂಡಾಕ್ರಿನೋಲಜಿ ಸೆಂಟರ್‌ನಲ್ಲಿ 100 ಬೆಡ್‌ಗಳ ಸೆಂಟರ್ ಸೋಮವಾರದಿಂದ ಆರಂಭವಾಗಲಿದೆ. ಇಂದಿರಾನಗರದ ಇಎಸ್‌ಐ ಆಸ್ಪತ್ರೆಯಲ್ಲಿ 50 ಆಕ್ಸಿಜನ್ ಬೆಡ್‌ಗಳನ್ನು ಹೆಚ್ಚಿಸಲು ಮತ್ತು ಸಿ.ವಿ ರಾಮನ್ ನಗರದ ಎಪಿಡೆಮಿಕ್ ಆಸ್ಪತ್ರೆಯ 24 ವೆಂಟಿಲೇಟರ್‌ಗಳನ್ನು ಬಳಕೆಗೆ ಸಜ್ಜುಗೊಳಿಸಿ ಅಗತ್ಯವಿರುವ ಕಡೆಗೆ ನೀಡಲು ಕೂಡಾ ಸಭೆಯಲ್ಲಿ ನಿರ್ಧರಿಸಲಾಗಿದೆ.

ಶಾಸಕರಾದ ಸಿ.ರಘು, ಕೆ.ಜೆ.ಜಾರ್ಜ್, ರಿಜ್ವಾನ್ ಅರ್ಷದ್, ರಮೇಶ್ ಗೌಡ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ವಸತಿ ಇಲಾಖೆ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಪೂರ್ವ ವಲಯ ಆಯುಕ್ತ ಮನೋಜ್ ಜೈನ್, ಪಾಲಿಕೆಯ ಜಂಟಿ ಆಯುಕ್ತರಾದ ಪಲ್ಲವಿ ಸಭೆಯಲ್ಲಿದ್ದರು.

‘ಬಾಂಗ್ಲಾ ರೆಮ್‌ಡಿಸಿರ್‌’ ತನಿಖೆ
‘ಮೇಡ್ ಇನ್ ಬಾಂಗ್ಲಾ ದೇಶ’ ಎಂದು ಹೆಸರಿರುವ ರೆಮ್‌ಡಿಸಿರ್‌ ಔಷಧಿ ಮಾರಾಟ ಪ್ರಕರಣವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಕೆಲವರನ್ನು ಬಂಧಿಸಲಾಗಿದೆ. ಈ ಔಷಧ ಬೆಂಗಳೂರಿಗೆ ಹೇಗೆ ಬಂತು? ಯಾವ ಆಸ್ಪತ್ರೆಯಿಂದ ಬಂತು? ಇದನ್ನು ಇಲ್ಲಿಗೆ ತಂದ ವ್ಯಕ್ತಿ ಯಾರು ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಮೇಡ್‌ ಇನ್‌ ಬಾಂಗ್ಲಾ
‘ಬಾಂಗ್ಲಾದೇಶದಲ್ಲಿ ಉತ್ಪಾದಿಸಲಾಗಿದೆ ಎನ್ನಲಾದ ರೆಮ್‌ಡಿಸಿವಿಆರ್ ಚುಚ್ಚುಮದ್ದು ಆರೋಪಿಯೊಬ್ಬನ ಬಳಿ ಸಿಕ್ಕಿದೆ. ಅದನ್ನು ಬೆಂಗಳೂರಿಗೆ ತಂದವರು ಯಾರು? ಎಲ್ಲಿಂದ ಬಂತು ? ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.