ಬೆಂಗಳೂರು: ಒಂಟಿ ಮಹಿಳೆಯರಿಂದ ಚಿನ್ನದ ಸರಗಳನ್ನು ದೋಚಿ, ಅವುಗಳನ್ನು ಮಾರಿದ ಹಣದಲ್ಲಿ ಕುದುರೆ ರೇಸ್ ಆಡುತ್ತಿದ್ದ ಆರೋಪಿಗಳು ವಿಜಯನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಲಗ್ಗೆರೆಯ ಚೌಡೇಶ್ವರಿ ನಗರ ನಿವಾಸಿ ಕೆ.ಪ್ರದೀಪ್, ಕಬ್ಬನ್ ಪೇಟೆಯ ಮಂಜುನಾಥ್ ಬಂಧಿತ ಸರಗಳ್ಳರು. ಇವರು ಕದ್ದು ತರುತ್ತಿದ್ದ ಒಡವೆಗಳನ್ನು ವಿಲೇವಾರಿ ಮಾಡುತ್ತಿದ್ದ ಪ್ರದೀಪ್ನ ಸಂಬಂಧಿ ಚೋಳರಪಾಳ್ಯದ ಸುನೀಲ್ ಸಹ ಜೈಲು ಸೇರಿದ್ದಾನೆ. ಆರೋಪಿಗಳಿಂದ ₹ 8 ಲಕ್ಷ ಮೌಲ್ಯದ 265 ಗ್ರಾಂ ಚಿನ್ನಾಭರಣ ಹಾಗೂ ಎರಡು ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
‘ವಿಜಯನಗರ ಹಾಗೂ ಆರ್ಪಿಸಿ ಲೇಔಟ್ನಲ್ಲಿ ಮೇಲಿಂದ ಮೇಲೆ ಸರಗಳವು ಕೃತ್ಯಗಳು ನಡೆಯುತ್ತಲೇ ಇದ್ದವು. ಹೀಗಾಗಿ, ಆ ಭಾಗದಲ್ಲಿ ಮಹಿಳೆಯರ ಸುರಕ್ಷತೆಗೆ ವಿಶೇಷ ನಿಗಾ ವಹಿಸುವಂತೆ ಹಾಗೂ ಸರಗಳ್ಳರನ್ನು ಪತ್ತೆ ಮಾಡುವಂತೆ ಎಸಿಪಿ ಎಚ್.ಎನ್.ಧರ್ಮೇಂದ್ರಯ್ಯ ಉಸ್ತುವಾರಿಯಲ್ಲಿ ಡಿಸಿಪಿ ವಿಶೇಷ ತಂಡ ರಚಿಸಿದ್ದರು. ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ ಬೈಕ್ನ ನೋಂದಣಿ ಸಂಖ್ಯೆ ಸಿಕ್ಕಿತು. ಆ ಸುಳಿವಿನ ಮೇರೆಗೆ ಪ್ರಕರಣ ಭೇದಿಸಲಾಯಿತು’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.