ಬೆಂಗಳೂರು: ‘ಚುನಾವಣೆಯಲ್ಲಿ ಗೆಲ್ಲುವುದು ದೊಡ್ಡ ವಿಚಾರ ಅಲ್ಲ. ಗೆದ್ದ ನಂತರ ಗೆಲುವಿಗೆ ಕಾರಣರಾದ ಶಿಕ್ಷಕರನ್ನು ಸಂಭಾಳಿಸುವುದೇ ದೊಡ್ಡ ಸವಾಲು’ ಎಂದು ವಿಧಾನ ಪರಿಷತ್ನ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಹೇಳಿದ ಕೆಲಸ ಮಾಡಿಕೊಡಲಿಲ್ಲವೆಂದರೆ ಶಿಕ್ಷಕರು ದೂಷಿಸಲು ಆರಂಭಿಸುತ್ತಾರೆ. ಪ್ರೀತಿ ಕಡಿಮೆಯಾದರೂ ಕಷ್ಟ, ಹೆಚ್ಚಾದರೂ ಕಷ್ಟ’ ಎಂದರು.
ಇದೇ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ ಅವರ 118ನೇ ಜನ್ಮದಿನವನ್ನು ಆಚರಿಸಲಾಯಿತು. ‘ಭಾರತದ ಪ್ರಜಾಪ್ರಭುತ್ವ ಮತ್ತು ಉತ್ತರದಾಯಿತ್ವ’ ವಿಷಯದ ಕುರಿತು ಮಾತನಾಡಿದ ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್, ‘ಈ ಹಿಂದೆ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿ ನಿರ್ದಿಷ್ಟ ಅವಧಿಗೆ ಸೀಮಿತವಾಗಿತ್ತು. ಆದರೆ, ಈಗಿನದ್ದು ಅನಿರ್ದಿಷ್ಟಾವಧಿ ತುರ್ತು ಪರಿಸ್ಥಿತಿ. ಇದೊಂದು ಪ್ರಜಾಪ್ರಭುತ್ವದ ಕರಾಳ ಅಧ್ಯಾಯ’ ಎಂದರು.
ನಾಯಕತ್ವ ಗುಣಗಳ ಬಗ್ಗೆ ಮಾತನಾಡಿದ ಶಿಕ್ಷಣ ತಜ್ಞ ಗುರುರಾಜ ಕರಜಗಿ, ‘ಇಡೀ ದೇಶ ಇಂದು ಉತ್ತಮ ನಾಯಕತ್ವದ ಹುಡುಕಾಟದಲ್ಲಿದೆ. ನಾಯಕ ಹೇಗಿರಬೇಕು ಎಂಬುದಕ್ಕೆ ಜಯಪ್ರಕಾಶ ನಾರಾಯಣ ಮಾದರಿ’ ಎಂದರು. ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್, ಎಂ.ಪಿ. ನಾಡಗೌಡ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.