ಬೆಂಗಳೂರು: ‘ನನ್ನ ಶಿಕ್ಷಣಕ್ಕೆ ಹಣವಿಲ್ಲ , ನನಗೆ ಮುಂದೆ ಓದಲು ಸಹಕರಿಸಿ...' ಎಂದು ಬರೆದಿರುವ ಹಾಳೆಗಳನ್ನು, ಕರಪತ್ರಗಳನ್ನು ಹಿಡಿದು ಕೆಲವು ಮಕ್ಕಳು ನಗರದ ಕೆಲವು ಭಾಗಗಳಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದಾರೆ.
‘ಶಿಕ್ಷಣದ ಹೆಸರಿನಲ್ಲಿ ಮಕ್ಕಳನ್ನು ಬಳಸಿಕೊಂಡು ಭಿಕ್ಷೆ ಬೇಡಿಸಲಾಗುತ್ತಿದೆ. ಈ ರೀತಿ ಮಕ್ಕಳನ್ನುಭಿಕ್ಷೆಗೆ ಬಳಸಿಕೊಳ್ಳುವುದು ಅವರ ಹಕ್ಕುಗಳ ಉಲ್ಲಂಘನೆ. ಮಕ್ಕಳ ನ್ಯಾಯ (ರಕ್ಷಣೆ - ಪೋಷಣೆ ) ಕಾಯ್ದೆ 2015 ರ ವಿಭಾಗ 76 ಮಕ್ಕಳನ್ನು ಭಿಕ್ಷೆ ಬೇಡಲು ಬಳಸಿದರೆ ಶಿಕ್ಷೆ ವಿಧಿಸಬೇಕು ಎಂಬ ಅಂಶವಿದೆ’ ಎನ್ನುತ್ತಾರೆ ಚೈಲ್ಡ್ ರೈಟ್ಸ್ ಟ್ರಸ್ಟ್ನ ನಾಗಸಿಂಹ ಜಿ. ರಾವ್.
‘ಶಿಕ್ಷಣ, ಆರೋಗ್ಯಕ್ಕೆ ಸಂಬಂಧಿಸಿದಂತೆ ಮಕ್ಕಳು ಹಣ ಕೇಳಿದರೆ, ಸಾರ್ವಜನಿಕರು ಹಣ ನೀಡಿಯೇ ನೀಡುತ್ತಾರೆ. ಆದರೆ, ಈ ರೀತಿ ಮಾಡಬಾರದು.ಮಕ್ಕಳು ನಗರದ ಯಾವುದೇ ರಸ್ತೆ ,ವೃತ್ತದಲ್ಲಿ ಭಿಕ್ಷೆ ಬೇಡುತಿದ್ದರೆ ಸಾರ್ವಜನಿಕರು 1098 ಮಕ್ಕಳ ಸಹಾಯವಾಣಿಗೆ ಕರೆ ಮಾಡಿದರೆ ಮಕ್ಕಳನ್ನು ರಕ್ಷಿಸಲಾಗುತ್ತದೆ’ ಎಂದು ಅವರು ಹೇಳಿದರು.
‘ಮಕ್ಕಳು ಶಿಕ್ಷಣ ಹೆಸರಿನಲ್ಲಿ ಬೇಡುತ್ತಿರುವುದನ್ನು ಕುರಿತು ಮಾಹಿತಿಯನ್ನು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ , ಮಕ್ಕಳ ಕಲ್ಯಾಣ ಇಲಾಖೆಗೆ ನೀಡಲಾಗಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.