ADVERTISEMENT

ಮಕ್ಕಳ ಸುರಕ್ಷತೆಯ ಅಧ್ಯಯನ: ತಜ್ಞರ ಸಮಿತಿ ರಚನೆ

ಕೋವಿಡ್‌ ಮೂರನೇ ಅಲೆ– ಬಿಬಿಎಂ‍ಪಿ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 19:54 IST
Last Updated 6 ಜುಲೈ 2021, 19:54 IST
ಗೌರವ್‌ ಗುಪ್ತ
ಗೌರವ್‌ ಗುಪ್ತ    

ಬೆಂಗಳೂರು: 'ಕೋವಿಡ್‌ ಮೂರನೇ ಅಲೆ ಸಂದರ್ಭದಲ್ಲಿ ಮಕ್ಕಳನ್ನು ಹೇಗೆ ಸುರಕ್ಷಿತವಾಗಿ ಇಡಬಹುದು ಎಂಬ ಕುರಿತು ನಗರಮಟ್ಟದಲ್ಲಿ ಅಧ್ಯಯನ ನಡೆಸಲು ತಜ್ಞರ ಸಮಿತಿ ರಚಿಸಿದ್ದೇವೆ. ಈ ಸಮಿತಿ ಶಿಫಾರಸಿನ ಆಧಾರದಲ್ಲಿ ಮಕ್ಕಳ ಬಗ್ಗೆ ಕಾಳಜಿ ವಹಿಸಲಿದ್ದೇವೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ತಿಳಿಸಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಕೋವಿಡ್‌ ಮೂರನೇ ಅಲೆ ಸಂದರ್ಭದಲ್ಲೂ ಮಕ್ಕಳಿಗಿಂತ ವಯಸ್ಸಾದವರಿಗೆ ಹೆಚ್ಚಿನ ಸಮಸ್ಯೆ. ಹಾಗಾಗಿ ಲಸಿಕಾ ಕಾರ್ಯಕ್ರಮದಲ್ಲೂ ವಯಸ್ಕರಿಗೆ ಆದ್ಯತೆ ನೀಡಲಾಗಿದೆ. ಹಿರಿಯರೆಲ್ಲರೂ ಲಸಿಕೆ ಪಡೆದರೆ ಮಕ್ಕಳೂ ಸುರಕ್ಷಿತವಾಗಿರುತ್ತಾರೆ. ಹಾಗಾಗಿ ನಮ್ಮ ಆದ್ಯತೆ ಅರ್ಹತೆ ಹೊಂದಿರುವ ಎಲ್ಲರಿಗೂ ಕೋವಿಡ್‌ ಲಸಿಕೆ ನೀಡುವುದು’ ಎಂದರು.

‘ನಗರದಲ್ಲೂ ಎಷ್ಟು ಜನರು ಕೋವಿಡ್‌ ವೈರಾಣುವಿಗೆ ಪ್ರತಿಕಾಯಗಳನ್ನು ಬೆಳೆಸಿಕೊಂಡಿದ್ದಾರೆ ಎಂಬ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ. ಬಿಬಿಎಂಪಿಯ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಈಗಾಗಲೇ ಸ್ಥಾಪಿಸಿರುವ ಕೋವಿಡ್‌ ಆರೈಕೆ ಕೇಂದ್ರಗಳು ಹಾಗು ಚಿಕಿತ್ಸೆ ನಿರ್ಧಾರ ಕೇಂದ್ರಗಳು ಈಗಲೂ ಸಕ್ರಿಯವಾಗಿವೆ’ ಎಂದರು.

ADVERTISEMENT

ಜೀನೋಮ್‌ ಸೀಕ್ವೆಂನ್ಸಿಂಗ್‌ ವರದಿ ಬರುವಾಗ ವಿಳಂಬವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತರು, ‘ಬಹುತೇಕ ಜೀನೋಮ್‌ ಸೀಕ್ವೆನ್ಸಿಂಗ್‌ ಅಧ್ಯಯನಗಳನ್ನು ರಾಜ್ಯ ಮಟ್ಟದಲ್ಲಿ ನಡೆಸಲಾಗುತ್ತಿದೆ. ಇದಕ್ಕೆ ಬಿಬಿಎಂಪಿ ಪೂರಕ ನೆರವು ನೀಡುತ್ತಿದೆ. ಬಿಬಿಎಂಪಿ ಮಟ್ಟದಲ್ಲಿ ನಡೆಸುವ ಅಧ್ಯಯನ ವರದಿ ತ್ವರಿತವಾಗಿ ಸಿಗುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.