ADVERTISEMENT

ಚಿತ್ರಸಂತೆ | ಕಲಾವಿದರ ಸಂಗಮ, ಕಲಾ ವೈಭವ ಅನಾವರಣ

​ಪ್ರಜಾವಾಣಿ ವಾರ್ತೆ
Published 7 ಜನವರಿ 2024, 23:31 IST
Last Updated 7 ಜನವರಿ 2024, 23:31 IST
<div class="paragraphs"><p>ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜಿಸಿದ್ದ ಚಿತ್ರಸಂತೆಗೆ ನಗರದ ವಿವಿಧೆಡೆಯಿಂದ ಬಂದಿದ್ದ ಜನರು ಕುಮಾರಕೃಪಾ ರಸ್ತೆಯಲ್ಲಿ ಕಲಾಕೃತಿಗಳನ್ನು ವೀಕ್ಷಿಸಿದರು </p></div>

ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜಿಸಿದ್ದ ಚಿತ್ರಸಂತೆಗೆ ನಗರದ ವಿವಿಧೆಡೆಯಿಂದ ಬಂದಿದ್ದ ಜನರು ಕುಮಾರಕೃಪಾ ರಸ್ತೆಯಲ್ಲಿ ಕಲಾಕೃತಿಗಳನ್ನು ವೀಕ್ಷಿಸಿದರು

   

ಪ್ರಜಾವಾಣಿ ಚಿತ್ರಗಳು - ಎಂ.ಎಸ್‌.ಮಂಜುನಾಥ್‌

ಬೆಂಗಳೂರು: ಎತ್ತ ಕಣ್ಣು ಹಾಯಿಸಿದರೂ ಬಣ್ಣ ಬಣ್ಣದ ಚಿತ್ತಾರ. ಸ್ಥಳದಲ್ಲಿಯೇ ತಮ್ಮ ಕೈಚಳಕ ತೋರುವ ಕಲಾವಿದರು. ಕಲಾರಸಿಕರ ಬೆರಗು ಹೆಚ್ಚಿಸುವ ವಿಭಿನ್ನ ಪ್ರಕಾರಗಳ ಕಲಾಕೃತಿಗಳು. ರಸ್ತೆಯುದ್ದಕ್ಕೂ ಕಿಕ್ಕಿರಿದು ಸೇರಿದ ಕಲಾಸಕ್ತರ ದಂಡು. 

ADVERTISEMENT

ಈ ದೃಶ್ಯ ಕಂಡದ್ದು ಕುಮಾರಕೃಪಾ ರಸ್ತೆಯಲ್ಲಿ. ಕರ್ನಾಟಕ ಚಿತ್ರಕಲಾ ಪರಿಷತ್ತು ನಗರದಲ್ಲಿ ಭಾನುವಾರ ಹಮ್ಮಿಕೊಂಡ 21ನೇ ಚಿತ್ರಸಂತೆಯಲ್ಲಿ ಕಲಾಲೋಕವೇ ಅನಾವರಣಗೊಂಡಿತ್ತು. ಈ ಚಿತ್ರಸಂತೆಯು ಕಲಾವಿದರ ಪ್ರತಿಭೆಗೆ ವೇದಿಕೆ ಕಲ್ಪಿಸುವುದರ ಜೊತೆಗೆ ಅವರು ರಚಿಸಿದ ಕಲಾಕೃತಿಗಳ ಮಾರಾಟಕ್ಕೂ ಅವಕಾಶ ಒದಗಿಸಿತ್ತು. ಚಿತ್ರಸಂತೆಯು ಕಲಾವಿದರ ಮತ್ತು ಕಲಾಸಕ್ತರ ನಡುವೆ ಬಾಂಧವ್ಯ ಬೆಸೆಯುವ ಸೇತುವೆಯಾಯಿತು. ರಂಗುರಂಗಿನ ಕಲಾಕೃತಿಗಳು ಕಲಾರಸಿಕರ ಸಂಭ್ರಮವನ್ನೂ ಇಮ್ಮಡಿಗೊಳಿಸಿದವು. 

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮಾಡಿದ ಸಾಧನೆ ಹಾಗೂ ಚಂದ್ರಯಾನ–3ರ ಯಶಸ್ಸಿನಿಂದಾಗಿ ಈ ಬಾರಿಯ ಚಿತ್ರಸಂತೆಯನ್ನು ಭಾರತೀಯ ವಿಜ್ಞಾನಿಗಳಿಗೆ ಸಮರ್ಪಣೆ ಮಾಡಲಾಗಿತ್ತು. ಪರಿಷತ್ತಿನ ಆವರಣದಲ್ಲಿ ಚಂದ್ರಯಾನ–3ರ ಪ್ರತಿಕೃತಿಯನ್ನೂ ಮಾಡಲಾಗಿತ್ತು. ಇದು ನೆರದಿದ್ದವರ ಗಮನಸೆಳೆಯುವಲ್ಲಿ ಯಶಸ್ವಿಯಾಯಿತು. ಪರಿಷತ್ತಿನ ಆವರಣದಲ್ಲಿ ಕಲಾಕೃತಿಗಳ ಜತೆಗೆ ಕರಕುಶಲ ವಸ್ತುಗಳು ಹಾಗೂ ಕಲಾಕೃತಿ ರಚನೆಗೆ ಅಗತ್ಯವಿರುವ ಬಣ್ಣ ಮತ್ತು ಅಗತ್ಯ ವಸ್ತುಗಳನ್ನೂ ಮಾರಾಟಕ್ಕೆ ಇರಿಸಲಾಗಿತ್ತು.  

ನಾನಾ ಪ್ರಕಾರದ ಕಲಾಕೃತಿ: ಮರಳಿನ ಚಿತ್ರಕಲೆ, ಜಲವರ್ಣ, ಆ್ಯಕ್ರಿಲಿಕ್‌, ಮಧುಬನಿ, ತೈಲವರ್ಣ, ಡಿಜಿಟಲ್‌ ಪೇಂಟಿಂಗ್‌, ತಂಜಾವೂರು ಶೈಲಿ, ರಾಜಸ್ಥಾನಿ ಶೈಲಿ, ಕಾಫಿ ಪೇಂಟಿಂಗ್‌ ಸೇರಿ ನಾನಾ ಪ್ರಕಾರದ ಕಲಾಕೃತಿಗಳು ಗಮನಸೆಳೆದವು. ಒಂದಕ್ಕಿಂತ ಮತ್ತೊಂದು ಕಲಾಕೃತಿಗಳು ಬೇರೊಂದು ಆಲೋಚನೆಗೆ ಹಚ್ಚಿದವು. ಅನುಪಯುಕ್ತ ವಸ್ತುಗಳೂ ಕಲಾಕೃತಿಯ ರೂಪ ಪಡೆದಿದ್ದವು. ಒಡೆದು ಹೋದ ಗಿಟಾರ್, ಕಾರ್ಯನಿರ್ವಹಿಸದ ವೀಣೆ ಸೇರಿ ವಿವಿಧ ಸಂಗೀತ ಉಪಕರಣಗಳಿಗೂ ಕಲಾವಿದರು ಬಣ್ಣದ ಸ್ಪರ್ಶದೊಂದಿಗೆ ಹೊಸ ರೂಪ ನೀಡಿದ್ದರು. 

ದೈವ ಕೋಲ, ಯಕ್ಷಗಾನ ವೇಷಧಾರಿಗಳು, ಮಹಿಳೆಯರ ವಿವಿಧ ಭಂಗಿಗಳು, ಪರಿಸರ, ವನ್ಯಜೀವಿಗಳು, ಐತಿಹಾಸಿಕ ದೇವಸ್ಥಾನಗಳು, ಗ್ರಾಮೀಣ ಸೊಗಡು, ಪೌರಾಣಿಕ ಪಾತ್ರಧಾರಿಗಳು, ಜಾನಪದ ನೃತ್ಯ, ಉತ್ಸವ ಹಾಗೂ ಧಾರ್ಮಿಕ ಆಚರಣೆಗಳು, ವಿಷ್ಣು, ಗಣಪತಿ ಸೇರಿ ವಿವಿಧ ದೇವರು, ನಾಟ್ಯರಾಣಿ ಶಾಂತಲೆ, ಗೌತಮ ಬುದ್ಧ ಹಾಗೂ ಕಾಡು ಹಣ್ಣುಗಳ ಕಲಾಕೃತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದವು. 

ರಸ್ತೆಯ ಉದ್ದಕ್ಕೂ ವ್ಯಕ್ತಿಯ ಭಾವಚಿತ್ರ ಹಾಗೂ ವ್ಯಂಗ್ಯ ಚಿತ್ರಗಳನ್ನು ಬಿಡಿಸುವವರು ಕಾಣಸಿಗುತ್ತಿದ್ದರು. ಪುಟ್ಟ ಮಕ್ಕಳು ಭಾವಚಿತ್ರ ಬಿಡಿಸಿಕೊಂಡು ಸಂಭ್ರಮಿಸಿದರೆ, ಯುವಕ ಯುವತಿಯರು ಹಚ್ಚೆ ಹಾಕಿಸಿಕೊಂಡು ಖುಷಿ ಪಟ್ಟರು.  

ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಸಂಚಾರಿ ಎಟಿಎಂ ವ್ಯವಸ್ಥೆ ಮಾಡಲಾಗಿತ್ತು. ಯುಪಿಐ ಆಧಾರಿತ ಆ್ಯಪ್‌ಗಳಿಂದಲೂ ಖರೀದಿ ವಹಿವಾಟು ನಡೆಯುತ್ತಿದ್ದುದು ಕಂಡುಬಂತು. ಸಂತೆಗೆ ಬಂದವರ ಹಸಿವು ನೀಗಿಸಲು ರುಚಿರುಚಿ ಆಹಾರದ ಮಳಿಗೆಗಳೂ ಇದ್ದವು.

ಚಿತ್ರಸಂತೆಯಲ್ಲಿದ್ದ ಸಿಂಹದ ಕಲಾಕೃತಿಯೊಂದನ್ನು ಕಲಾಸಕ್ತರು ಫೋಟೊ ಕ್ಲಿಕ್ಕಿಸಿಕೊಂಡರು 
₹ 15 ಲಕ್ಷ ಮೌಲ್ಯದ ಜಲ್ಲಿಕಟ್ಟು ಕ್ರೀಡೆಯ ಕಲಾಕೃತಿ 
ಮೈಸೂರಿನ ದಸರಾ ದರ್ಬಾರ್‌ ಬಿಂಬಿಸುವ ಕಲಾಕೃತಿಗಳು
ಚಿತ್ರಸಂತೆಯಲ್ಲಿದ್ದ ಉಬ್ಬು ಕಲಾಕೃತಿಗಳು
ಕಲಾವಿದರೊಬ್ಬರು ವಿವಿಧ ಮಾದರಿಯ ಕಲಾಕೃತಿಗಳನ್ನು ಪ್ರದರ್ಶಿಸಿದರು
ಚಿತ್ರಸಂತೆಗೆ ಹದಿನೈದು ವರ್ಷಗಳಿಂದ ಬರುತ್ತಿದ್ದೇನೆ. ಹೆಚ್ಚಾಗಿ ಉತ್ಸವಗಳ ಕಲಾಕೃತಿ ರಚಿಸುತ್ತಿದ್ದು ಕಲಾಸಕ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. 
।ಮೀನಾಕ್ಷಿ ಸದಲಗಿ ಕಲಾವಿದೆ 
ಕಲಾ ಗ್ಯಾಲರಿಗಳಲ್ಲಿ ದುಬಾರಿ ಶುಲ್ಕ ನೀಡಿ ಪ್ರದರ್ಶನ ನೀಡುವುದು ಕಷ್ಟ. ಇಲ್ಲಿ ಎಲ್ಲ ರೀತಿಯ ಕಲಾಸಕ್ತರ ಜತೆ ಸಂಪರ್ಕ ಬಾಂಧವ್ಯ ಬೆಳೆಯುತ್ತದೆ. 
।ಪರಶುರಾಮ್ ಕಲಾವಿದ
ಕಲಾವಿದರಿಗೆ ಚಿತ್ರಸಂತೆ ಉತ್ತಮ ವೇದಿಕೆಯಾಗಿದ್ದು ಹಲವು ವರ್ಷಗಳಿಂದ ಪಾಲ್ಗೊಳ್ಳುತ್ತಿದ್ದೇನೆ. ವರ್ಷದಿಂದ ವರ್ಷಕ್ಕೆ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚುತ್ತಿದೆ.
।ಚೈತ್ರ ಮಂದಾರ ಕಲಾವಿದೆ 
1500 ಕಲಾವಿದರು ಭಾಗಿ
ದೇಶದ ವಿವಿಧ ಭಾಗಗಳಿಂದ 1500 ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಿ ಕಲಾಕೃತಿಗಳನ್ನು ಪ್ರದರ್ಶಿಸಿದರು. ಕರ್ನಾಟಕದ ಜತೆಗೆ ಕೇರಳ ತಮಿಳುನಾಡು ಆಂಧ್ರಪ್ರದೇಶ ಗೋವಾ ಮಹಾರಾಷ್ಟ್ರ ಪಂಜಾಬ್ ಪಶ್ಚಿಮ ಬಂಗಾಳ ಒಡಿಶಾ ಸೇರಿದಂತೆ ವಿವಿಧ ರಾಜ್ಯಗಳ ಕಲಾವಿದರು ಪಾಲ್ಗೊಂಡಿದ್ದರು. 1300ಕ್ಕೂ ಅಧಿಕ ಮಳಿಗೆಗಳು ಮೇಳದಲ್ಲಿ ಇದ್ದವು. ವೃತ್ತಿನಿರತ ಕಲಾವಿದರ ಜತೆಗೆ ಹವ್ಯಾಸಿ ಕಲಾವಿದರು ಹಾಗೂ ಕಲಾ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದರು. ಶಿವಾನಂದ ಸರ್ಕಲ್‌ನಿಂದ ವಿಂಡ್ಸನ್ ಮ್ಯಾನರ್‌ವರೆಗೆ ಕುಮಾರಕೃಪಾ ರಸ್ತೆಯಲ್ಲಿ ಕ್ರೆಸೆಂಟ್ ರಸ್ತೆಯ ಆಯ್ದ ಸ್ಥಳದಲ್ಲಿ ಶಿವಾನಂದ ವೃತ್ತದಿಂದ ಗುರುರಾಜ ಕಲ್ಯಾಣ ಮಂಟಪದವರೆಗೆ ಸ್ಟೀಲ್ ಮೇಲ್ಸೇತುವೆ ಕೆಳಭಾಗ ಹಾಗೂ ಭಾರತ ಸೇವಾದಳದ ಆವರಣದಲ್ಲಿ ಕಲಾಕೃತಿಗಳ ಪ್ರದರ್ಶನ ನಡೆಯಿತು. ಪರಿಷತ್ತು ಸಂಗ್ರಹಿಸಿರುವ ತೊಗಲು ಗೊಂಬೆ ಹಾಗೂ ಮೈಸೂರಿನ ಸಾಂಪ್ರದಾಯಿಕ ಕಲಾಕೃತಿಗಳ ಪ್ರದರ್ಶನ ಪರಿಷತ್ತಿನ ಗ್ಯಾಲರಿಗಳಲ್ಲಿ ಹಮ್ಮಿಕೊಳ್ಳಲಾಗಿತ್ತು.
₹15 ಲಕ್ಷದವರೆಗಿನ ಕಲಾಕೃತಿ
ಚಿತ್ರಸಂತೆಯಲ್ಲಿ ₹ 1 ಸಾವಿರದಿಂದ ₹15 ಲಕ್ಷದವರೆಗಿನ ಕಲಾಕೃತಿಗಳಿದ್ದವು. ಕೆಲವರು ದುಬಾರಿ ಬೆಲೆ ಕೇಳಿ ಅಚ್ಚರಿಪಟ್ಟರೂ ಕಲಾವಿದರ ಪ್ರತಿಭೆ ಮತ್ತು ಶ್ರಮಕ್ಕೆ ತಲೆದೂಗಿದರು. ಆಂಧ್ರಪ್ರದೇಶದ ಕಲಾವಿದ ಹನುಮಂತ ಅವರು ಲೆದರ್ ಶೀಟ್‌ನಲ್ಲಿ ರಾಮಾಯಣದ ಸುಂದರ ಕಾಂಡದ ಘಟನೆಗಳನ್ನು ಚಿತ್ರಿಸಿದ್ದು ಇದನ್ನು ಪ್ರದರ್ಶನಕ್ಕೆ ಇರಿಸಿದ್ದರು. ಬೆಳಗಾವಿಯ ಮೀನಾಕ್ಷಿ ಸದಲಗಿ ಅವರು ಮೈಸೂರಿನ ರಾಜ ವೈಭವವನ್ನು ನೆನಪಿಸುವ ಹಲವು ಕಲಾಕೃತಿಗಳನ್ನು ಪ್ರದರ್ಶನಕ್ಕೆ ತಂದಿದ್ದರು. ಹೈದರಾಬಾದ್ ಕಲಾವಿದ ಪರಶುರಾಮ್ ಅವರು ತೈಲವರ್ಣ ಬಳಸಿ ಜಲ್ಲಿಕಟ್ಟು ಕ್ರೀಡೆಯನ್ನು ಚಿತ್ರಿಸಿದ್ದು ಇದಕ್ಕೆ ₹ 15 ಲಕ್ಷ ನಿಗದಿಪಡಿಸಿದ್ದರು. ಇದು ಎಂಟು ಅಡಿ ಉದ್ದ ಹಾಗೂ ಆರು ಅಡಿ ಅಗಲವಿದ್ದು ಇದಕ್ಕೆ ತೇಗದ ಮರದ ಚೌಕಟ್ಟು ಬಳಸಲಾಗಿದೆ. 
ಫೀಡರ್‌ ಬಸ್‌ ಕಾರ್ಯಾಚರಣೆ
ಚಿತ್ರಸಂತೆಗೆ ತೆರಳುವವರಿಗೆ ಅನುಕೂಲಕ್ಕಾಗಿ ಇದೇ ಮೊದಲ ಬಾರಿ ಮೆಟ್ರೊ ಫೀಡರ್‌ ಬಸ್‌ ಕಾರ್ಯಾಚರಣೆ ನಡೆಸಿದವು. ಕೆಂಪೇಗೌಡ ಬಸ್‌ ನಿಲ್ದಾಣ–ಆನಂದರಾವ್ ಸರ್ಕಲ್‌–ಶಿವಾನಂದ ಸ್ಟೋರ್ಸ್‌ ರಸ್ತೆಯಲ್ಲಿ ನಾಲ್ಕು ಬಿಎಂಟಿಸಿ ಬಸ್‌ಗಳು ಮತ್ತು ಮಂತ್ರಿ ಮಾಲ್‌ ಮೆಟ್ರೊ ನಿಲ್ದಾಣ-ವಿಧಾನಸೌಧ ಸೆಂಟ್ರಲ್‌ ಟಾಕೀಸ್‌ ಲಿಂಕ್‌ ರಸ್ತೆ ಶಿವಾನಂದ ಸ್ಟೋರ್ಸ್ ರಸ್ತೆಯಲ್ಲಿ ನಾಲ್ಕು ಬಸ್‌ಗಳು ಪ್ರತಿ 10 ನಿಮಿಷಕ್ಕೆ ಒಂದರಂತೆ ಸಂಚರಿಸಿದವು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.