ADVERTISEMENT

ಚಿತ್ರಕಲಾ ಪರಿಷತ್‌ಗೆ ಆರ್ಥಿಕ ನಷ್ಟ ಆರೋಪ; ನಾಲ್ವರ ವಿರುದ್ಧ ಎಫ್‌ಐಆರ್‌

₹ 60.62 ಲಕ್ಷ ದುರ್ಬಳಕೆ l

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 19:47 IST
Last Updated 8 ಜೂನ್ 2019, 19:47 IST
   

ಬೆಂಗಳೂರು: ರಾಜ್ಯ ಸರ್ಕಾರ ನೀಡಿದ್ದ ಅನುದಾನದಲ್ಲಿ ₹ 60.62 ಲಕ್ಷ ದುರ್ಬಳಕೆ ಮಾಡಿಕೊಂಡು ಚಿತ್ರಕಲಾ ಪರಿಷತ್‌ಗೆ ಆರ್ಥಿಕ ನಷ್ಟ ಉಂಟು ಮಾಡಿ ಸದಸ್ಯರನ್ನು ವಂಚಿಸಿದ ಆರೋಪದಡಿ ಪರಿಷತ್‌ನ ಹಿಂದಿನ ಅಧ್ಯಕ್ಷ ಸೇರಿದಂತೆ ನಾಲ್ವರ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಶುಕ್ರವಾರ ಎಫ್‌ಐಆರ್‌ ದಾಖಲಾಗಿದೆ.

‘ಹಣ ದುರ್ಬಳಕೆ ಹಾಗೂ ವಂಚನೆ ಸಂಬಂಧ ಪರಿಷತ್‌ನ ಮಾಜಿ ನೌಕರ ಟಿ.ಎಂ.ವಿ. ಗೌಡ ದೂರು ನೀಡಿದ್ದಾರೆ. ಅಂದಿನ ಅಧ್ಯಕ್ಷರೂ ಆಗಿದ್ದ ಹಾಲಿ ಉಪಾಧ್ಯಕ್ಷ ಟಿ. ಪ್ರಭಾಕರ್,‍ಪ್ರಧಾನ ಕಾರ್ಯದರ್ಶಿ ಎಂ.ಜಿ. ಕಮಲಾಕ್ಷಿ, ಉಪಾಧ್ಯಕ್ಷ ಹರೀಶ್ ಪದ್ಮನಾಭ ಹಾಗೂ ಸಹಾಯಕ ಕಾರ್ಯದರ್ಶಿ ಕೆ.ಎಸ್. ಅಪ್ಪಾಜಯ್ಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

2007– 2009 ಆರ್ಥಿಕ ವರ್ಷದಲ್ಲಿ ಅನುದಾನ ದುರ್ಬಳಕೆ ಆಗಿರುವುದಾಗಿ ಆರೋಪಿಸಿ ಕೆಲವು ಸದಸ್ಯರು ಸಂಘಗಳ ಜಿಲ್ಲಾ ನೋಂದಣಾಧಿಕಾರಿ ಕಚೇರಿಗೆ ದೂರು ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ್ದ ಜಿಲ್ಲಾ ನೋಂದಣಾಧಿಕಾರಿಗಳ ನ್ಯಾಯಾಲಯ, ದುರ್ಬಳಕೆ ಆಗಿರುವ ₹ 60.62 ಲಕ್ಷವನ್ನು ಆರೋಪಿಗಳಿಂದ ವಸೂಲಿ ಮಾಡುವಂತೆ ಆದೇಶ ಹೊರಡಿಸಿತ್ತು.

ADVERTISEMENT

ಅದೇ ಆದೇಶವನ್ನು ಆಧರಿಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದೂರುದಾರರು, ನಗರ ಪೊಲೀಸ್ ಕಮಿಷನರ್ ಕಚೇರಿಗೆ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.

ತೇಜೋವಧೆಗೆ ಯತ್ನ: ತಮ್ಮ ವಿರುದ್ಧದ ಆರೋಪದ ಕುರಿತು ಮಾತನಾಡಿದ ಟಿ.ಪ್ರಭಾಕರ್, ‘ಜಿಲ್ಲಾ ನೋಂದಣಾಧಿಕಾರಿಗಳ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ಅದರ ವಿಚಾರಣೆ ನಡೆಯುತ್ತಿದೆ. ಅದರ ನಡುವೆಯೇ ಈ ಪ್ರಕರಣ ದಾಖಲಾಗಿದ್ದು, ಇದರ ಹಿಂದೆ ಕೆಲವರ ಷಡ್ಯಂತ್ರವಿದೆ’ ಎಂದು ಆರೋಪಿಸಿದರು.

‘ನಗರ ಪೊಲೀಸ್ ಕಮಿಷನರ್‌ ಅವರಿಗೆ ತಪ್ಪು ಮಾಹಿತಿ ನೀಡಿ ದೂರು ದಾಖಲಾಗುವಂತೆ ಮಾಡಿ ನಮ್ಮ ಹಾಗೂ ಚಿತ್ರಕಲಾ ಪರಿಷತ್‌ನ ತೇಜೋವಧೆಗೆ ಯತ್ನಿಸಲಾಗಿದೆ’ ಎಂದೂ ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.