ಬೆಂಗಳೂರು: ಐಟಿ ತಾಣವೆಂದೇ ಹೆಸರಾಗಿರುವ ರಾಜಧಾನಿಯ ಆಗ್ನೇಯ ಭಾಗದ ಸರ್ಜಾಪುರ, ಕೋರಮಂಗಲ, ಎಚ್ಎಸ್ಆರ್ ಲೇಔಟ್, ಕಸವನಹಳ್ಳಿ, ಮಹದೇವಪುರ ಮತ್ತು ಬೊಮ್ಮನಹಳ್ಳಿಯಲ್ಲಿ ಮಾರಕ ಕಾಲರಾ ರೋಗ ಪತ್ತೆಯಾಗಿದೆ.
ಈ ಪ್ರದೇಶಗಳಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆ ದಾಖಲಾದವರ ಪೈಕಿ ನಾಲ್ವರಲ್ಲಿ ಕಾಲರಾ ರೋಗ ಪತ್ತೆಯಾಗಿದೆ. ಇದೇ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಈ ಮೇಲಿನ ಪ್ರದೇಶಗಳಲ್ಲಿ ನೀರಿನ ಮಾದರಿ ಸಂಗ್ರಹಿಸಿದ್ದಾರೆ. ಅಲ್ಲದೆ, ರೋಗ ಮೂಲ ಪತ್ತೆಯಾಗುವವರೆಗೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸುವಂತೆ ಜಲಮಂಡಳಿಗೆ ಆದೇಶ ನೀಡಲಾಗಿದೆ. ಜೊತೆಗೇ, ಟ್ಯಾಂಕರ್ಗಳ ಮೂಲಕ ಶುದ್ಧ ಕುಡಿಯುವ ನೀರು ಪೂರೈಸುವಂತೆ ಸೂಚಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಬಿ.ಕೆ ವಿಜಯೇಂದ್ರ, ’ನಾಗರಿಕರಿಗೆ ನಾವು ಈಗಾಗಲೇ ಕಾಯಿಲೆ ಬಗ್ಗೆ ಮಾಹಿತಿ ನೀಡಿದ್ದೇವೆ. ಅಲ್ಲದೆ, ಸ್ಥಳೀಯ ಬಿಬಿಎಂಪಿ ಕಚೇರಿಯಲ್ಲಿ ಸಹಾಯ ಕೇಂದ್ರಗಳನ್ನು ತೆರದಿದ್ದೇವೆ. ಕಾಯಿಲೆ ಹಿನ್ನೆಲೆಯಲ್ಲಿ ನಾವು ಅಂಬೇಡ್ಕರ್ ವೈದ್ಯಕೀಯ ಕಾಲೇಜಿನ ಸಿಬ್ಬಂದಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಕಾಡುಗೊಂಡನಹಳ್ಳಿ ಭಾಗದಿಂದ ಗ್ಯಾಸ್ಟ್ರೋಎಂಟರಾಲಜಿ ವರದಿಗಳನ್ನು ತರಿಸಿಕೊಂಡಿದ್ದೇವೆ. ಕಾಯಿಲೆ ಬಗ್ಗೆ ಬಿಬಿಎಂಪಿಗೆ ಸ್ಪಷ್ಟ ಅರಿವಿದೆ. ನಮ್ಮ ವೈದ್ಯಾಧಿಕಾರಿಗಳು ಈಗಾಗಲೇ ಸ್ಥಳಕ್ಕೆ ತೆರಳಿ ಅಧ್ಯಯನದಲ್ಲಿ ತೊಡಗಿದ್ದಾರೆ,’ ಎಂದು ಅವರು ತಿಳಿಸಿದ್ದಾರೆ.
ಇನ್ನು ಆಗ್ನೇಯ ಪ್ರದೇಶಗಳಿಗೆ ಹೊಂದಿಕೊಂಡಿರುವ ಕೋರಮಂಗಲ ಮತ್ತು ಎಚ್ಎಸ್ಆರ್ ಲೇಔಟ್ ಪ್ರದೇಶಗಳಲ್ಲಿ ಕಾಲರಾ ರೋಗ ಪತ್ತೆಯಾಗಿಲ್ಲ ಎಂದು ಸೆಂಟ್ ಜಾನ್ಸ್ ಆಸ್ಪತ್ರೆಯ ಮುಖ್ಯಸ್ಥರು ಹೇಳಿದ್ದಾರೆ.
ಕಾಲರಾ ಪತ್ತೆಯಾಗಿರುವ ಪ್ರದೇಶದ ವ್ಯಾಪ್ತಿಯಲ್ಲಿ ಜಲಮಂಡಳಿ ಪೈಪ್ಗಳ ರಿಪೇರಿ ಕಾರ್ಯ ನಡೆಯುತ್ತಿದ್ದು, ನೀರಿನೊಂದಿಗೆ ಒಳಚರಂಡಿಯ ಕಲುಷಿತ ನೀರೂ ಸೇರಿರುವ ಸಾಧ್ಯತೆಗಳಿವೆ. ಇದೇ ಕಾರಣಕ್ಕೇ ಕಾಲರಾ ರೋಗ ಕಾಣಿಸಿಕೊಂಡಿದೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.