
ಕಡತ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಸಾಲ ಕೊಡಿಸುವ ನೆಪ ಹಾಗೂ ನಿವೇಶನ ಮಾರಾಟ ಮಾಡಿಸಿಕೊಡುವುದಾಗಿ ಉದ್ಯಮಿಗಳಿಗೆ ವಂಚಿಸಿದ್ದ ಆರೋಪದ ಮೇರೆಗೆ ಪೀಟರ್ ಕ್ಯಾಡಿ ಎಂಬುವವರ ಮನೆ ಸೇರಿ ಒಂಬತ್ತು ಸ್ಥಳಗಳಲ್ಲಿ ಸಿಐಡಿಯ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
ಪುಲಕೇಶಿನಗರದ ಕೋಲ್ಸ್ ಪಾರ್ಕ್ ಸಮೀಪದ ಪೀಟರ್ ಕ್ಯಾಡಿ ಮನೆ, ಕಚೇರಿಗಳಲ್ಲಿ ಅಧಿಕಾರಿಗಳ ತಂಡ ದಾಖಲೆಗಳನ್ನು ಪರಿಶೀಲಿಸಿದೆ. ಆರೋಪಿಯು ಸುಮಾರು ಹತ್ತು ವರ್ಷಗಳಿಂದ ಉದ್ಯಮಿಗಳಿಗೆ ವಂಚಿಸುತ್ತಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ಗೊತ್ತಾಗಿದೆ. ಆರೋಪಿಯೇ ವಂಚನೆಗೊಳಗಾದವರ ವಿರುದ್ಧ ಸುಳ್ಳು ಚೆಕ್ಬೌನ್ಸ್ ಪ್ರಕರಣ ದಾಖಲಿಸಿರುವುದು ಪತ್ತೆಯಾಗಿದೆ.
ನೂರಕ್ಕೂ ಹೆಚ್ಚು ಮಂದಿ ವಂಚನೆಗೊಳಗಾಗಿದ್ದಾರೆ. ₹96 ಲಕ್ಷ ವಂಚಿಸಿದ್ದಾನೆ ಎಂದು 2025ರ ಆಗಸ್ಟ್ನಲ್ಲಿ, ಬಿ.ಸಿ.ಸುಬ್ಬರಾವ್ ಎಂಬುವವರು ಆರೋಪಿ ವಿರುದ್ಧ ದೂರು ನೀಡಿದ್ದರು. ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಅದರ ಗಂಭೀರತೆ ಅರಿತು ಸಿಐಡಿಗೆ ಪ್ರಕರಣ ವರ್ಗಾವಣೆಯಾಗಿತ್ತು.
‘ನಗರದ ಚೋಳನಾಯಕನಹಳ್ಳಿ ನಿವಾಸಿ ಸುಬ್ಬರಾವ್ ಕೋಲ್ಸ್ ಪಾರ್ಕ್ ಬಳಿ 2016ರಲ್ಲಿ ನಿವೇಶನ ಖರೀದಿಸಿದ್ದರು. ಈ ಜಾಗಕ್ಕೆ ಖಾತಾ ಮಾಡಿಸಲು ಪರಿಚಯಸ್ಥರ ಮೂಲಕ ರಿಯಲ್ ಎಸ್ಟೇಟ್ ವ್ಯವಹಾರ ಹಾಗೂ ಸ್ಕ್ರ್ಯಾಪ್ ಡೀಲರ್ ಆಗಿದ್ದ ಪೀಟರ್ ಕ್ಯಾಡಿಯನ್ನು ಸಂಪರ್ಕಿಸಿದ್ದರು. ಅವರಿಂದ ಶುಲ್ಕದ ರೂಪದಲ್ಲಿ ₹8 ಲಕ್ಷ ಪಡೆದಿದ್ದ. ಈ ಮಧ್ಯೆ ಸುಬ್ಬರಾವ್ ಅವರ ಒಡೆತನದಲ್ಲಿರುವ ನೆಲ್ಲಕುಂಟೆ ಗ್ರಾಮದ 317 ಎಕರೆ ಜಮೀನು ಮಾರಾಟಕ್ಕೆ ಮುಂದಾಗಿದ್ದರು. ಈ ವಿಷಯ ಅರಿತ ಆರೋಪಿ, ನನ್ನ ಸ್ನೇಹಿತರೊಬ್ಬರು ಶಾಲೆ ತೆರೆಯಲು 150ರಿಂದ 200 ಎಕರೆ ಜಮೀನು ಹುಡುಕಾಟ ನಡೆಸುತ್ತಿದ್ದಾರೆ. ಮಾರಾಟ ಮಾಡಿಸಿಕೊಡುವುದಾಗಿ ನಂಬಿಸಿ, ದಾಖಲೆಗಳನ್ನು ಸಿದ್ಧಪಡಿಸುವುದಾಗಿ ಹೇಳಿ ₹96 ಲಕ್ಷ ಪಡೆದಿದ್ದ’ ಎಂದು ಮೂಲಗಳು ತಿಳಿಸಿವೆ.
‘ಹಲವು ದಿನ ಕಳೆದರೂ, ಖಾತಾ ಮಾಡಿಸಿಕೊಡದೆ, ಜಮೀನು ಸಹ ನೋಂದಣಿ ಮಾಡಿಸದೆ ತಪ್ಪಿಸಿಕೊಳ್ಳುತ್ತಿದ್ದ ಆರೋಪಿಯನ್ನು ಪ್ರಶ್ನಿಸಿದಾಗ, ಸುಬ್ಬರಾವ್ ಅವರು ದಾಖಲೆಗಳಿಗಾಗಿ ನೀಡಲಾಗಿದ್ದ ಖಾಲಿ ಚೆಕ್ಗಳನ್ನು ದುರುಪಯೋಗಪಡಿಸಿಕೊಂಡು ಸುಳ್ಳು ಚೆಕ್ಬೌನ್ಸ್ ಕೇಸ್ ಹಾಕಿದ್ದ’ ಎಂದು ಮೂಲಗಳು ತಿಳಿಸಿವೆ.
ಸಾಲದ ಅಗತ್ಯ ಇರುವವರನ್ನು ಸಂಪರ್ಕಿಸುತ್ತಿದ್ದ ಪೀಟರ್ ಕ್ಯಾಡಿ, ತಾನು ಬ್ಯಾಂಕ್ ಬಡ್ಡಿಗಿಂತಲೂ ಕಡಿಮೆಗೆ ಕೋಟ್ಯಂತರ ರೂಪಾಯಿ ಸಾಲ ಕೊಡಿಸುವುದಾಗಿ ನಂಬಿಸುತ್ತಿದ್ದ. ಆರಂಭದಲ್ಲಿ ಕೋಟ್ಯಂತರ ರೂಪಾಯಿ ಮೊತ್ತದ ಡಿ.ಡಿ. ಯನ್ನು ಉದ್ಯಮಿಗಳ ಹೆಸರಿನಲ್ಲಿ ತೆಗೆದುಕೊಂಡು ತೋರಿಸುತ್ತಿದ್ದ. ಪೀಟರ್ ಕ್ಯಾಡಿ ಮತ್ತು ಆತನ ಗ್ಯಾಂಗ್ ನಂಬಿದ್ದ ಹತ್ತಾರು ಮಂದಿ ಖಾಲಿ ಚೆಕ್ಗಳು ಮತ್ತು ಆಸ್ತಿ ಪತ್ರಗಳನ್ನು ನೀಡುತ್ತಿದ್ದರು. ಈ ಹಂತದಲ್ಲಿ ಕೋಟ್ಯಂತರ ರೂಪಾಯಿಯನ್ನು ಪ್ರಕ್ರಿಯಾ ಶುಲ್ಕ ಮತ್ತು ಕಮಿಷನ್ ಅಂತ ಪಡೆದುಕೊಂಡು ಸಾಲ ಕೊಡದೇ ಮೋಸ ಮಾಡುತ್ತಿದ್ದ. ಹಣ ವಾಪಸು ನೀಡುವಂತೆ ಕೇಳಿದರೆ ಅವರು ನೀಡಿದ್ದ ಚೆಕ್ ಮತ್ತು ಆಸ್ತಿ ಪತ್ರಗಳನ್ನು ದುರ್ಬಳಕೆ ಮಾಡಿಕೊಡಿಕೊಂಡು ಅವರ ವಿರುದ್ಧವೇ ನ್ಯಾಯಾಲಯಗಳಲ್ಲಿ ಚೆಕ್ಬೌನ್ಸ್ ಪ್ರಕರಣ ದಾಖಲಿಸುತ್ತಿದ್ದ ಎನ್ನಲಾಗಿದೆ.
ಯಾರಾದರೂ ಕಚೇರಿಗೆ ಭೇಟಿ ನೀಡಿ ಹಣ ವಾಪಸು ಕೇಳಿದರೆ, ಪೀಟರ್ ಕ್ಯಾಡಿ ತನ್ನ ಮಹಿಳಾ ಮ್ಯಾನೇಜರ್ವೊಬ್ಬರಿಂದ ಸುಳ್ಳು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿ ಕಿರುಕುಳ ಕೊಡಿಸುತ್ತಿದ್ದ. ಅಮಿತ್ ಕ್ಯಾಡಿ, ಅಶ್ವಿನಿ, ಹರಿಮೋಹನ್ ನಾಯ್ಡು, ಅಲ್ತಫ್ , ಚಾರಿ ಮುರಳಿ ಹಾಗೂ ಇತರರ ತಂಡ ಕಟ್ಟಿಕೊಂಡು ಪೀಟರ್ ಕ್ಯಾಡಿ ವಂಚನೆ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಮಹಿಳೆಯರಿಂದ ಸುಳ್ಳು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು
ಯಾರಾದರೂ ಕಚೇರಿಗೆ ಭೇಟಿ ನೀಡಿ ಹಣ ವಾಪಸು ಕೇಳಿದರೆ, ಪೀಟರ್ ತನ್ನ ಮಹಿಳಾ ಮ್ಯಾನೇಜರ್ವೊಬ್ಬರಿಂದ ಸುಳ್ಳು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿ ಕಿರುಕುಳ ಕೊಡಿಸುತ್ತಿದ್ದ. ಅಮಿತ್ ಕ್ಯಾಡಿ, ಅಶ್ವಿನಿ, ಹರಿಮೋಹನ್ ನಾಯ್ಡು, ಅಲ್ತಫ್ , ಚಾರಿ ಮುರಳಿ ಹಾಗೂ ಇತರರ ತಂಡ ಕಟ್ಟಿಕೊಂಡು ಪೀಟರ್ ಕ್ಯಾಡಿ ವಂಚನೆ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಸಾಲದ ಅಗತ್ಯ ಇರುವವರನ್ನು ಸಂಪರ್ಕಿಸುತ್ತಿದ್ದ ಪೀಟರ್ ಕ್ಯಾಡಿ, ತಾನು ಬ್ಯಾಂಕ್ ಬಡ್ಡಿಗಿಂತಲೂ ಕಡಿಮೆಗೆ ಕೋಟ್ಯಂತರ ರೂಪಾಯಿ ಸಾಲ ಕೊಡಿಸುವುದಾಗಿ ನಂಬಿಸುತ್ತಿದ್ದ. ಆರಂಭದಲ್ಲಿ ಕೋಟ್ಯಂತರ ರೂಪಾಯಿ ಮೊತ್ತದ ಡಿ.ಡಿ. ಯನ್ನು ಉದ್ಯಮಿಗಳ ಹೆಸರಿನಲ್ಲಿ ತೆಗೆದುಕೊಂಡು ತೋರಿಸುತ್ತಿದ್ದ. ಪೀಟರ್ ಮತ್ತು ಆತನ ಗ್ಯಾಂಗ್ ನಂಬಿದ್ದ ಹತ್ತಾರು ಮಂದಿ ಖಾಲಿ ಚೆಕ್ಗಳು ಮತ್ತು ಆಸ್ತಿ ಪತ್ರಗಳನ್ನು ನೀಡುತ್ತಿದ್ದರು. ಈ ಹಂತದಲ್ಲಿ ಪ್ರಕ್ರಿಯಾ ಶುಲ್ಕ ಮತ್ತು ಕಮಿಷನ್ ಅಂತ ಪಡೆದುಕೊಂಡು ಸಾಲ ಕೊಡದೇ ಮೋಸ ಮಾಡುತ್ತಿದ್ದ. ಹಣ ವಾಪಸು ನೀಡುವಂತೆ ಕೇಳಿದರೆ ಅವರು ನೀಡಿದ್ದ ಚೆಕ್ ಮತ್ತು ಆಸ್ತಿ ಪತ್ರಗಳನ್ನು ದುರ್ಬಳಕೆ ಮಾಡಿಕೊಡಿಕೊಂಡು ಅವರ ವಿರುದ್ಧವೇ ಚೆಕ್ಬೌನ್ಸ್ ಪ್ರಕರಣ ದಾಖಲಿಸುತ್ತಿದ್ದ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.