ADVERTISEMENT

ಸಿನಿಮಾ ಅವಕಾಶ ಕೊಡಿಸುವ ನೆಪದಲ್ಲಿ ಪರಿಚಯ: ಮದುವೆಯಾಗುವುದಾಗಿ ಯುವತಿಗೆ ವಂಚನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2024, 15:45 IST
Last Updated 19 ಫೆಬ್ರುವರಿ 2024, 15:45 IST
   

ಬೆಂಗಳೂರು: ಸಿನಿಮಾದಲ್ಲಿ ಅವಕಾಶ ಕೊಡಿಸುವ ನೆಪದಲ್ಲಿ ಯುವತಿಯನ್ನು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ಹೇಳಿ ವಂಚಿಸಿರುವ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘27 ವರ್ಷದ ಯುವತಿ ದೂರು ನೀಡಿದ್ದಾರೆ. ಅತ್ತಿಬೆಲೆಯ ಶಾನಭೋಗನಹಳ್ಳಿ ನಿವಾಸಿ ಸಂತೋಷ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ರಾಯಚೂರಿನ ಯುವತಿ, ತಂದೆ– ತಾಯಿ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. 2019ರಲ್ಲಿ ಯುವತಿಗೆ ಸಂತೋಷ್‌ ಪರಿಚಯವಾಗಿತ್ತು. ಸಿನಿಮಾ ನಟನೆಂದು ಆರೋಪಿ ಹೇಳಿಕೊಂಡಿದ್ದ. ಕನ್ನಡ ಹಾಗೂ ತಮಿಳು ಸಿನಿಮಾದಲ್ಲಿ ನಟಿಯಾಗಿ ಅಭಿನಯಿಸಲು ಅವಕಾಶ ಕೊಡಿಸುವುದಾಗಿ ಯುವತಿಗೆ ತಿಳಿಸಿದ್ದ. ಅದನ್ನು ನಂಬಿದ್ದ ಯುವತಿ, ಆರೋಪಿಗೆ ತಮ್ಮ ಮೊಬೈಲ್ ನಂಬರ್ ನೀಡಿದ್ದರು.’

ADVERTISEMENT

‘ಯುವತಿಗೆ ಕರೆ ಮಾಡಲಾರಂಭಿಸಿದ್ದ ಸಂತೋಷ್, ಮದುವೆಯಾಗುವುದಾಗಿ ಹೇಳಿ ಸಲುಗೆ ಬೆಳೆಸಿದ್ದ. ಯುವತಿ ಹಾಗೂ ಆರೋಪಿ, ಹಲವೆಡೆ ಸುತ್ತಾಡಿದ್ದರು. ಇದೇ ಸಂದರ್ಭದಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ’ ಎಂದು ಪೊಲೀಸರು ತಿಳಿಸಿದರು.

ಬೇರೊಬ್ಬ ಯುವತಿ ಜೊತೆ ಮದುವೆ: ‘ಆರೋಪಿ ಸಂತೋಷ್, ಬೇರೊಬ್ಬ ಯುವತಿ ಜೊತೆ ಮದುವೆಯಾಗಿದ್ದ. ಅದು ತಿಳಿಯುತ್ತಿದ್ದಂತೆ ದೂರುದಾರ ಯುವತಿ, ಆರೋಪಿ ಮನೆಗೆ ಹೋಗಿ ಪ್ರಶ್ನಿಸಿದ್ದರು. ಸಿಟ್ಟಾದ ಆರೋಪಿ, ಯುವತಿ ಮನೆಗೆ ಬಂದು ಗಲಾಟೆ ಮಾಡಿದ್ದಾನೆ. ಯುವತಿಯ ಖಾಸಗಿ ಫೋಟೊ ಹಾಗೂ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಕೃತ್ಯ ಸಂಬಂಧ ಯುವತಿ ಈ ಹಿಂದೆಯೂ ದೂರು ನೀಡಿದ್ದರು. ಅದರಡಿ ದಾಖಲಿಸಿಕೊಂಡಿದ್ದ ಪ್ರಕರಣವನ್ನು ಕೃತ್ಯ ನಡೆದ ಸ್ಥಳದ ಆಧಾರದಲ್ಲಿ ಅತ್ತಿಬೆಲೆ ಠಾಣೆಗೆ ವರ್ಗಾಯಿಸಲಾಗಿತ್ತು. ಇದೀಗ ಮತ್ತೊಂದು ದೂರು ನೀಡಿದ್ದು, ತನಿಖೆ ಮುಂದುವರಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.