ADVERTISEMENT

‘ರೌಡಿಸಂ ಮಾಡಿದರೆ ಕಾಲು ಮುರಿಯಿರಿ’

ಪೊಲೀಸರಿಗೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಖಡಕ್ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2018, 19:55 IST
Last Updated 15 ಡಿಸೆಂಬರ್ 2018, 19:55 IST
ಡಾ.ಜಿ.ಪರಮೇಶ್ವರ
ಡಾ.ಜಿ.ಪರಮೇಶ್ವರ   

ಬೆಂಗಳೂರು: ‘ರೌಡಿಸಂ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ ಪೊಲೀಸರು ಕಾಲು ಮುರಿಯುತ್ತಾರೆ. ಹೆಚ್ಚು ಉಪಟಳ ಮಾಡಿದರೆ ಗುಂಡೇಟಿನ ರುಚಿಯನ್ನೂ ತೋರಿಸುತ್ತಾರೆ’ ಎಂದು ಸಮಾಜಘಾತುಕ ಶಕ್ತಿಗಳಿಗೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಎಚ್ಚರಿಕೆ ನೀಡಿದರು.

ದೇವರಜೀವನಹಳ್ಳಿ ಪೊಲೀಸ್‌ ಠಾಣೆಯ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಅಪರಾಧ ಕೃತ್ಯಗಳಲ್ಲಿ ತೊಡಗುವವರ ಕಾಲಿಗೆ ಮುಲಾಜಿಲ್ಲದೇ ಗುಂಡು ಹೊಡೆಯಿರಿ. ಅವರು ಜೈಲಿಗೆ ಹೋಗುವುದರ ಜತೆಗೆ, ಆ ಗುಂಡೇಟಿನ ನೋವನ್ನು ಜೀವನ ಪರ್ಯಂತ ಅನುಭವಿಸಲಿ. ಅವರ ಸ್ಥಿತಿ ನೋಡಿ ಇತರರೂ ಅಪರಾಧ ಕೃತ್ಯಗಳಲ್ಲಿ ತೊಡಗಲು ಅಂಜಬೇಕು. ನೀವು ಏನೂ ಮಾಡುತ್ತೀರೋ ಗೊತ್ತಿಲ್ಲ. ಜನ ನೆಮ್ಮಂದಿಯಿಂದ ಇರಬೇಕಷ್ಟೇ’ ಎಂದು ಪೊಲೀಸರಿಗೆ ಸೂಚಿಸಿದರು.

ADVERTISEMENT

‘ಬಡವರು, ಮಧ್ಯಮ ವರ್ಗದವರೇ ಹೆಚ್ಚಾಗಿ ಅಪರಾಧ ಕೃತ್ಯಗಳಲ್ಲಿ ತೊ‌ಡಗುತ್ತಿದ್ದಾರೆ. ತಮ್ಮ ದುಡಿಮೆಯ ಬಹುಪಾಲು ಹಣವನ್ನುನ್ಯಾಯಾಲಯದಲ್ಲಿ ವಕೀಲರಿಗೆ ಖರ್ಚು ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ನಿತ್ಯ 10 ಸಾವಿರ ಪ್ರಕರಣ: ‘ನಗರದ 167 ಕಡೆಗಳಲ್ಲಿ ಅತ್ಯಾಧುನಿಕ ಕ್ಯಾಮೆರಾ ಅಳವಡಿಸಲಾಗಿದ್ದು, ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗುತ್ತದೆ. ನಿತ್ಯವೂ 10 ಸಾವಿರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಿವೆ’ ಎಂದು ಪರಮೇಶ್ವರ ಹೇಳಿದರು. ‘ಪೊಲೀಸ್ ಇಲಾಖೆಯಲ್ಲಿ ಇತ್ತೀಚೆಗೆ ಶಿಸ್ತು ಕಡಿಮೆಯಾಗುತ್ತಿದೆ. ವರ್ಗಾವಣೆ ಮಾಡಿದ ಸ್ಥಳಕ್ಕೆ ಕೆಲ ಸಿಬ್ಬಂದಿ ಹೋಗದೆ ಅಶಿಸ್ತು ತೋರುತ್ತಿದ್ದಾರೆ. ಹಿರಿಯ ಅಧಿಕಾರಿಗಳು ಹೇಳುವ ಕೆಲಸ ಮಾಡುವಲ್ಲಿ ಕೆಲ ಸಿಬ್ಬಂದಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸೇನೆ ಬಿಟ್ಟರೆ ಪೊಲೀಸ್ ಇಲಾಖೆಯೇ ಶಿಸ್ತಿಗೆ ಹೆಸರಾಗಿದ್ದು, ಅದನ್ನು ಕಾಪಾಡದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಪೊಲೀಸರಿಗೂ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.