ಬೆಂಗಳೂರು: ‘ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ದೇವೇಂದ್ರಪ್ಪ ಅವರು ನಗರ ಮತ್ತು ಗ್ರಾಮಾಂತರಯೋಜನಾ ಇಲಾಖೆಯ ಅಧಿಕಾರಿ ಅಲ್ಲ’ ಎಂದು ಕರ್ನಾಟಕ ನಗರ ಮತ್ತು ಗ್ರಾಮಾಂತರ ಇಲಾಖಾನೌಕರರ ಸಂಘ ಸ್ಪಷ್ಟನೆ ನೀಡಿದೆ.
ಕಟ್ಟಡವೊಂದರ ಸ್ವಾಧೀನಾನುಭವ ಪತ್ರ (ಒ.ಸಿ) ನೀಡಲು ₹20 ಲಕ್ಷ ಲಂಚ ಪಡೆಯುತ್ತಿದ್ದ ಪಾಲಿಕೆಯ ಬೊಮ್ಮನಹಳ್ಳಿ ವಲಯದ ನಗರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕ ದೇವೇಂದ್ರಪ್ಪ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶುಕ್ರವಾರ ಬಂಧಿಸಿತ್ತು.
‘ಬಂಧಿತರು ಪಾಲಿಕೆಯಿಂದ ಹಾಗೂ ಬೇರೆ ಇಲಾಖೆಗಳಿಂದ ನಿಯೋಜನೆಗೊಂಡು ಕೆಲಸ ನಿರ್ವಹಿಸುತ್ತಿರುವ ಅಧಿಕಾರಿ. ಅವರು ನಮ್ಮ ಇಲಾಖೆಗೆ ಒಳಪಡದೇ ಇರುವುದರಿಂದ ಹುದ್ದೆಯ ಪದನಾಮ ಬಳಕೆಯಿಂದ ಇಲಾಖೆಗೂ ಕೆಟ್ಟ ಹೆಸರು. ಈ ಸಂಬಂಧ ಪಾಲಿಕೆ ಆಯುಕ್ತರಿಗೆ ಪತ್ರ ಬರೆದು, ಬಂಧಿತರ ಮಾತೃ ಇಲಾಖೆಯ ಪದನಾಮ ನೀಡಲು ಮನವಿ ಮಾಡಲಾಗುತ್ತಿದೆ’ ಎಂದು ಸಂಘದ ಅಧ್ಯಕ್ಷ ಆರ್.ಶೇಷ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.