ಬೆಂಗಳೂರು: 'ಚಿತ್ರದುರ್ಗಶಿವಮೂರ್ತಿ ಮುರುಘಾ ಶ್ರೀಗಳ ಜನ್ಮದಿನವನ್ನು (ಏಪ್ರಿಲ್ 11) 'ಸಮಾನತ ದಿನ'ವಾಗಿ ಆಚರಣೆ ಮಾಡಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಶಿವಮೂರ್ತಿ ಮುರುಘಾ ಶ್ರೀಗಳ ಜನ್ಮದಿನದ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ಸೋಮವಾರ ನಡೆದ 'ಸಮಾನತ ದಿನ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಸರ್ಕಾರದಿಂದ ಸಮಾನತ ದಿನ ಆಚರಿಸಲಾಗುವುದು' ಎಂದರು.
'ಈ ದೇಶಕ್ಕೆ ಚರಿತ್ರೆ ಇದೆ. ಬೇಕಾಗಿರುವುದು ಚಾರಿತ್ರ್ಯಯುಕ್ತ ಸಮಾಜ. ಬೇಕಾದಷ್ಟು ಜನ ಆಚಾರ್ಯರು ಇದ್ದಾರೆ, ಇನ್ನೂ ಬೇಕಾಗಿರುವುದು ಆಚರಣೆ' ಎಂದು ಮುಖ್ಯಮಂತ್ರಿ ಹೇಳಿದರು.
'ಜಗತ್ತಿನಲ್ಲೇ ಅತ್ಯಂತ ಮೂಲಭೂತ ಪರಿವರ್ತನೆ ಆಗಿರುವುದು ಕೇವಲ ವ್ಯಕ್ತಿಗಳಿಂದ, ಶಕ್ತಿಗಳಿಂದ. ಬುದ್ಧ, ಬಸವ, ಅಲ್ಲಮಪ್ರಭು, ಕ್ರಿಸ್ತ, ಮೊಹಮದ್ ಪೈಗಂಬರ್, ಮಹಾವೀರ ಮುಂತಾದವರಿಂದ ಪರಿವರ್ತನೆ ಆಗಿದೆ. ಇವರೆಲ್ಲ ಜಗತ್ತಿನಲ್ಲಿ ಆಮೂಲಾಗ್ರ ಬದಲಾವಣೆ ತಂದಿದ್ದಾರೆ. ಎಲ್ಲವನ್ನೂ ತ್ಯಾಗ ಮಾಡಿ ವಿಭಿನ್ನ ತತ್ವ ಆದರ್ಶ ಹೇಳಿದವರು. ಇವರೆಲ್ಲರ ತ್ಯಾಗ, ಬಲಿದಾನದಿಂದ ಸುಧಾರಣೆ ಆಗಿದೆ' ಎಂದರು.
ಕಾರ್ಯಕ್ರಮದಲ್ಲಿ ಕಾಗಿನೆಲೆ ಮಠದ ನಿರಂಜನಾನಂದಪುರಿ ಶ್ರೀ,ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗಶ್ರೀ,ಸಚಿವರಾದ ಗೋವಿಂದ ಕಾರಜೋಳ, ಸುನೀಲ್ ಕುಮಾರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಿ ವೈ ವಿಜಯೇಂದ್ರ ಇದ್ದರು. ಹಲವು ಮಠಗಳ ಮಠಾಧೀಶರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.