ADVERTISEMENT

‘ಕನಕದಾಸರು ಯಾವುದೇ ಜಾತಿಗೆ ಸೀಮಿತವಲ್ಲ’

ನಟರಾಜ ಬೂದಾಳು, ಬಿ.ಎನ್. ಮೂರ್ತಿಗೆ ‘ಕನಕ ಶ್ರೀ’ ಪ್ರಶಸ್ತಿ ಪ್ರದಾನ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 5:01 IST
Last Updated 16 ನವೆಂಬರ್ 2019, 5:01 IST
ಡಾ.ನಟರಾಜ ಬೂದಾಳು ಹಾಗೂ ಬಿ.ಎನ್. ಮೂರ್ತಿ ಅವರಿಗೆ ‘ಕನಕ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಿ.ಟಿ.ರವಿ, ಶಾಸಕ ಉದಯ್ ಬಿ.ಗರುಡಾಚಾರ್, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮನಂದಪುರಿ ಸ್ವಾಮೀಜಿ ಮತ್ತು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಇದ್ದರು – ಪ್ರಜಾವಾಣಿ ಚಿತ್ರ
ಡಾ.ನಟರಾಜ ಬೂದಾಳು ಹಾಗೂ ಬಿ.ಎನ್. ಮೂರ್ತಿ ಅವರಿಗೆ ‘ಕನಕ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಿ.ಟಿ.ರವಿ, ಶಾಸಕ ಉದಯ್ ಬಿ.ಗರುಡಾಚಾರ್, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮನಂದಪುರಿ ಸ್ವಾಮೀಜಿ ಮತ್ತು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಇದ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದಾಸಶ್ರೇಷ್ಠರಾದ ಕನಕದಾಸರ ಬದುಕೇ ಮಾನವ ಕುಲಕ್ಕೆ ಒಂದು ಸಂದೇಶ. ಜಾತ್ಯತೀತ ಮೌಲ್ಯಗಳನ್ನು ಪ್ರತಿಪಾದಿಸಿದ ಕನಕದಾಸರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬಾರದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಕನಕದಾಸರ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ‘ಕನಕದಾಸರ ಆದರ್ಶಗಳನ್ನು, ಅವರ ತತ್ವಗಳನ್ನು ಕಾರ್ಯರೂಪಕ್ಕೆ ತಂದರೆ ಮಾತ್ರ ಅವರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ’.‘ಮಾನವತೆಯನ್ನು ಸಾರಿದ ಕನಕದಾಸರ ವಚನಗಳೇ ನಮ್ಮ ಬದುಕಿಗೆ ದಾರಿದೀಪವಾಗಬೇಕು’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ, ‘ಸರ್ಕಾರದ ವತಿಯಿಂದ 27 ಮಹನೀಯರ ಜಯಂತಿ ಆಚರಿಸುತ್ತಿದ್ದೇವೆ. ಇದಕ್ಕೆ ಕಾರಣ ಅವರ ಜಾತಿ ಅಥವಾ ಅಂತಸ್ತು ಅಲ್ಲ. ಅವರ ಸಮಾಜಮುಖಿ ಬದುಕಿನ ಕಾರಣಕ್ಕೆ ನಾವು ಅವರ ಜಯಂತ್ಯುತ್ಸವ ಮಾಡುತ್ತಿದ್ದೇವೆ. ಆದರೆ, ನಾವು ಇಂತಹ ಮಹಾನುಭಾವರನ್ನು ಜಾತಿಯ ಚೌಕಟ್ಟಿನಲ್ಲಿ ಬಂಧಿಸುತ್ತಿದ್ದೇವೆ’ ಎಂದರು.

ADVERTISEMENT

‘ಅಮೆರಿಕ, ಆಸ್ಟ್ರೇಲಿಯಾ, ದುಬೈನಲ್ಲಿಯೂ ಜಾತಿ ಸಂಘಗಳಿವೆ. ವಿದ್ಯಾವಂತರಲ್ಲಿಯೇ ಹೆಚ್ಚು ಜಾತಿ ಸಂಘಟನೆ ಹೆಚ್ಚುತ್ತಿದೆ. ಮಹಾನುಭಾವರ ಜಯಂತಿ ಮಾಡಿ ಅವರ ಜಾತಿ ಪೂಜಿಸುವುದಕ್ಕಿಂತ, ಅವರ ತತ್ವಗಳನ್ನು ಪೂಜಿಸುವ ಕೆಲಸವಾಗಬೇಕು’ ಎಂದರು.

ಡಾ. ನಟರಾಜ ಬೂದಾಳು ಅವರಿಗೆ 2018ನೇ ಮತ್ತು ಬಿ.ಎನ್. ಮೂರ್ತಿಯವರಿಗೆ 2019ನೇ ಸಾಲಿನ ಕನಕಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮೆರವಣಿಗೆ ಸಂಭ್ರಮ: ಕಾರ್ಯಕ್ರಮಕ್ಕೂ ಮುನ್ನ, ಕನಕದಾಸರ ವಚನ ಸಂದೇಶ ಸಾರುವ ಸ್ತಬ್ಧಚಿತ್ರಗಳ ಮೆರವಣಿಗೆ ಗಾಂಧಿನಗರದ ಕನಕದಾಸ ವೃತ್ತದಿಂದ ರವೀಂದ್ರ ಕಲಾಕ್ಷೇತ್ರದವರೆಗೆ ನಡೆಯಿತು.ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಜನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.