ಬೆಂಗಳೂರು: ‘ಹೊಸ ಹೊಸ ನೀತಿಗಳ ಮೂಲಕ ಸಹಕಾರಿ ಬ್ಯಾಂಕುಗಳ ಶಕ್ತಿ ಕುಂದಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ’ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಪಟ್ಟಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಚ್.ಕೆ. ಪಾಟೀಲ ಆರೋಪಿಸಿದರು.
ದಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ವತಿಯಿಂದ ಬ್ಯಾಂಕಿನ ಸಂಸ್ಥಾಪಕ ವೈ.ವಿ. ಕೇಶವಮೂರ್ತಿ ಸ್ಮರಣಾರ್ಥ ರೂಪಿಸಿರುವ ‘ಕಿರುಸಾಲ ಯೋಜನೆ’ ಉದ್ಘಾಟಿಸಿ ಅವರು ಮಾತನಾಡಿದರು.
ವಿಧಾನ ಪರಿಷತ್ತಿನ ಸದಸ್ಯ ಯು.ಬಿ. ವೆಂಕಟೇಶ್, ‘ರಾಜ್ಯದಲ್ಲಿ ಸಹಕಾರಿ ಬ್ಯಾಂಕುಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಒಂದೆರಡು ಸಹಕಾರಿ ಬ್ಯಾಂಕುಗಳ ಲೋಪದಿಂದ ಎಲ್ಲ ಬ್ಯಾಂಕುಗಳನ್ನು ಅನುಮಾನದಿಂದ ನೋಡುವಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಕೆಎಸ್ಆರ್ಪಿ ಎಡಿಜಿಪಿ ಅಲೋಕ್ಕುಮಾರ್, ‘ಸಣ್ಣಪುಟ್ಟ ವ್ಯಾಪಾರ ನಡೆಸುವವರು ಮೀಟರ್ ಬಡ್ಡಿ ಪಡೆಯುತ್ತಾರೆ. ಬಡ್ಡಿ ದಂಧೆಕೋರರು ಮನೆ, ವಾಹನ, ಚಿನ್ನ, ಆಸ್ತಿ ಅಡಮಾನ ಇರಿಸಿಕೊಳ್ಳುತ್ತಾರೆ. ಕಿರುಸಾಲದ ರೀತಿಯ ಯೋಜನೆಗಳು ಬಡ್ಡಿ ದಂಧೆಯಂತಹ ಅಕ್ರಮಗಳನ್ನು ತಡೆಯುತ್ತವೆ’ ಎಂದರು. ಇದೇ ವೇಳೆ ಸಾಂಕೇತಿಕವಾಗಿ 25 ಜನರಿಗೆ ಕಿರುಸಾಲ ವಿತರಿಸಲಾಯಿತು.
’ಮೀಟರ್ ಬಡ್ಡಿ ದಂಧೆ ತಪ್ಪಿಸುವ ಯೋಜನೆ‘
‘ಕಷ್ಟದಲ್ಲಿರುವ ಸಮಾಜದ ಕಟ್ಟಕಡೆಯ ಜನರಿಗೆ ಸುಲಭವಾಗಿ ಸಾಲ ದೊರಕಿಸುವ ಮತ್ತು ಆ ಜನರನ್ನು ಮೀಟರ್ ಬಡ್ಡಿ ದಂಧೆಯಿಂದ ತಪ್ಪಿಸಲು ಕಿರುಸಾಲ ಯೋಜನೆ ರೂಪಿಸಲಾಗಿದೆ’ ಎಂದು ಬ್ಯಾಂಕಿನ ಅಧ್ಯಕ್ಷ ಎಚ್.ಸಿ. ಕೃಷ್ಣ ತಿಳಿಸಿದರು.
ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಎಸ್. ರೂಪಾ ಮಾತನಾಡಿ, ‘₹5 ಸಾವಿರದಿಂದ ₹25 ಸಾವಿರದ ತನಕ ಸಾಲ ನೀಡಲಾಗುವುದು. ಮರು ಪಾವತಿಗೆ 24 ತಿಂಗಳ ಕಾಲಾವಕಾಶ ಇರುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.