ಬೆಂಗಳೂರು: ಕರಾವಳಿಯ ಮೂರು ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ಜಾರಿಗೆ ತರಬೇಕು ಹಾಗೂ ಮರಳು ಗಣಿಗಾರಿಕೆ ನಿಯಮಗಳಿಗೆ ತಿದ್ದುಪಡಿ ತರಬೇಕು ಎಂದು ಕರಾವಳಿ ಶಾಸಕರು ಸರ್ಕಾರವನ್ನು ಒತ್ತಾಯಿಸಿದರು.
ವಿಧಾನಸಭೆಯಲ್ಲಿ ಬಿಜೆಪಿಯ ಗೂಳಿಹಟ್ಟಿ ಶೇಖರ್ ಅವರ ಗಮನ ಸೆಳೆಯುವ ಸೂಚನೆಯಡಿ ಚರ್ಚೆಯ ಸಂದರ್ಭ ಬಿಜೆಪಿಯ ಸುನಿಲ್ ಕುಮಾರ್, ರಘುಪತಿ ಭಟ್ ಮತ್ತು ಇತರರು ಪ್ರತ್ಯೇಕ ಮರಳು ನೀತಿಯ ವಿಷಯ ಪ್ರಸ್ತಾಪಿಸಿದರು.
‘ಕರಾವಳಿಯ ಮೂರು ಜಿಲ್ಲೆಗಳ ನದಿಯಲ್ಲಿ ಮುಳುಗಿ ಮರಳು ತೆಗೆಯುವ ಕ್ರಮ ಬಹಳ ಹಿಂದಿನಿಂದಲೂ ಇದೆ. ಅದನ್ನು ಮುಂದುವರಿಸಬೇಕು. ಅದಕ್ಕಾಗಿ ನದಿಯಲ್ಲಿ ಮರಳು ಗಣಿಗಾರಿಕೆ ನಿಷೇಧವನ್ನು ತೆಗೆಯಬೇಕು. ಇದು ಕೇವಲ ಕರಾವಳಿಗೆ ಜಿಲ್ಲೆಗಳಿಗೆ ಮಾತ್ರ ಅನ್ವಯ ಆಗಬೇಕು’ ಎಂದು ಸುನಿಲ್ ಕುಮಾರ್ ಹೇಳಿದರು.
ನೂರಾರು ವರ್ಷಗಳಿಂದ ಇದೇ ಉದ್ಯೋಗ ಮಾಡಿಕೊಂಡು ಬಂದ ಕುಟುಂಬಗಳಿವೆ. ಮರಳು ತೆಗೆಯುವ ಲೈಸೆನ್ಸ್ ಅನ್ನು ಅವರಿಗೇ ನೀಡಲು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ರಘುಪತಿ ಭಟ್ ಮಾತನಾಡಿ, ಗುಜರಾತಿನಲ್ಲಿ ಇದಕ್ಕಾಗಿ ಪ್ರತ್ಯೇಕ ನೀತಿ ಇದೆ. ರಾಜ್ಯದ ಕರಾವಳಿ ಶಾಸಕರು ಮತ್ತು ಅಧಿಕಾರಿಗಳು ಅಲ್ಲಿಗೆ ತೆರಳಿ ಅಧ್ಯಯನ ನಡೆಸಿ ಬಂದಿದ್ದೇವೆ. ಗುಜರಾತಿನಲ್ಲೂ ಪರಂಪರಾಗತವಾಗಿ ಮರಳು ತೆಗೆಯುವ ಕುಟುಂಬಗಳಿಗೆ ಅನುಮತಿ ನೀಡಲಾಗುತ್ತಿದೆ. ರಾಜ್ಯದಲ್ಲೂ ಅದೇ ಮಾದರಿ ಅನುಸರಿಸುವಂತೆ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.