ಬೆಂಗಳೂರು: ವಾಹಿನಿಯೊಂದರ ರಿಯಾಲಿಟಿ ಶೋನಲ್ಲಿ ಬಂದಿದ್ದ ಹಣ ಹಂಚಿಕೊಳ್ಳುವ ವಿಚಾರವಾಗಿ ಹಾಸ್ಯ ಕಲಾವಿದರ ನಡುವೆ ಗಲಾಟೆ ಆಗಿದ್ದು, ಈ ಪ್ರಕರಣ ಠಾಣೆ ಮೆಟ್ಟಿಲೇರಿದೆ.
‘ಕಲಾವಿದೆ ನಯನಾ ನನಗೆ ಜೀವ ಬೆದರಿಕೆಯೊಡ್ಡಿದ್ದಾರೆ. ಅವರನ್ನು ಠಾಣೆಗೆ ಕರೆಯಿಸಿ ಎಚ್ಚರಿಕೆ ನೀಡಿ’ ಎಂದು ಕಲಾವಿದ ಸೋಮಶೇಖರ್, ರಾಜರಾಜೇಶ್ವರಿನಗರ ಠಾಣೆಗೆ ಅರ್ಜಿ ನೀಡಿದ್ದಾರೆ. ಇದನ್ನು ಸ್ವೀಕರಿಸಿರುವ ಪೊಲೀಸರು, ವಿಚಾರಣೆಗೆ ಬರುವಂತೆ ನಯನಾ ಅವರಿಗೆ ನೋಟಿಸ್ ನೀಡಿದ್ದಾರೆ.
‘ರಿಯಾಲಿಟಿ ಶೋನಲ್ಲಿ ಕಲಾವಿದರ ತಂಡಕ್ಕೆ ಬಹುಮಾನ ರೂಪದಲ್ಲಿ ಹಣ ಬಂದಿತ್ತು. ಅದರ ಹಂಚಿಕೆ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದೆ. ಸೋಮಶೇಖರ್ ತಮ್ಮ ಪರವಾಗಿ ಹೇಳಿಕೆ ನೀಡಿದ್ದಾರೆ. ಆರೋಪಿ ಎನ್ನಲಾದ ನಯನಾ ಅವರ ಹೇಳಿಕೆ ಪಡೆಯಬೇಕಿದೆ. ಬಳಿಕವೇ, ನಿಜಾಂಶ ತಿಳಿಯಲಿದೆ’ ಎಂದು ಪೊಲೀಸರು ಹೇಳಿದರು.
ಆಡಿಯೊ ಹರಿದಾಟ: ಸೋಮಶೇಖರ್ ಅವರಿಗೆ ನಯನಾ ಕಳುಹಿಸಿದ್ದ ಆಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
‘ರಿಯಾಲಿಟಿ ಶೋನಿಂದ ಬಂದಿದ್ದ ಹಣವನ್ನು ನಿನ್ನ (ಸೋಮಶೇಖರ್) ಖಾತೆಗೆ ಜಮೆ ಮಾಡಿಸಲಾಗಿತ್ತು. ಆದರೆ, ನೀನು ಸಹ ಕಲಾವಿದರಿಗೆ ಯಾವುದೇ ಹಣ ನೀಡಿಲ್ಲ. ಇದರಿಂದ ಎಲ್ಲ ಕಲಾವಿದರಿಗೆ ತೊಂದರೆ ಆಗಿದೆ. ಎಲ್ಲರಿಗೂ ಹಣ ಕೊಡು. ಇಲ್ಲದಿದ್ದರೆ, ಪರಿಣಾಮ ಎದುರಿಸಬೇಕಾಗುತ್ತದೆ. ಠಾಣೆಗೆ ಹೋಗಿ ದೂರು ನೀಡುತ್ತೇವೆ’ ಎಂಬ ಸಂಭಾಷಣೆ ಆಡಿಯೊದಲ್ಲಿದೆ. ಇದೇ ಆಡಿಯೊವನ್ನೇ ಸೋಮಶೇಖರ್, ಪೊಲೀಸರಿಗೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.