ADVERTISEMENT

ಪ್ರತಿಭಟನೆ ಬಾಂಡ್ ಕಡ್ಡಾಯ ಕೈಬಿಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 19:58 IST
Last Updated 6 ಫೆಬ್ರುವರಿ 2020, 19:58 IST

ಬೆಂಗಳೂರು: ನಗರದ ಪುರಭವನದಬಳಿ ಪ್ರತಿಭಟನೆ ನಡೆಸಲು ₹10 ಲಕ್ಷ ಮೊತ್ತದ ಬಾಂಡ್ ನೀಡುವುದನ್ನು ಪೊಲೀಸ್ ಇಲಾಖೆ ಕಡ್ಡಾಯ ಮಾಡಿದ್ದು, ಈ ನಿರ್ಧಾರ ಕೈಬಿಡುವಂತೆ ವಕೀಲರು, ಸಾಹಿತಿಗಳು ಒತ್ತಾಯಿಸಿದ್ದಾರೆ.

ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಜಿ.ಶಿವಣ್ಣ, ವಕೀಲರಾದ ಎಚ್.ಡಿ.ಅಮರನಾಥ್, ಧನಂಜಯ, ಸಾಹಿತಿಗಳಾದ ಡಾ.ಕೆ.ಮರುಳಸಿದ್ದಪ್ಪ, ಡಾ.ಎಸ್.ಜಿ.ಸಿದ್ಧರಾಮಯ್ಯ, ಕಾಂಗ್ರೆಸ್ ಹಿರಿಯ ಮುಖಂಡ ಪ್ರೊ.ಬಿ.ಕೆ.ಚಂದ್ರಶೇಖರ್ ಅವರು ಬಾಂಡ್ ಕಡ್ಡಾಯ ಮಾಡಿರುವುದಕ್ಕೆ ಜಂಟಿ ಹೇಳಿಕೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವ ವಿರೋಧಿ ನಿರ್ಧಾರ ಜಾರಿಗೊಳಿಸದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ. ಬಾಂಡ್ ಕಡ್ಡಾಯ ಜಾರಿಯಾದರೆ ಇನ್ನು ಮುಂದೆ ಶ್ರೀಮಂತ ಸಂಘಟಕರಿಗೆ ಮಾತ್ರ ಪ್ರತಿಭಟಿಸುವ ಅವಕಾಶ ಇರುತ್ತದೆ. ದಲಿತರು, ಪ್ರಗತಿಪರರು, ಸಾಂಸ್ಕೃತಿಕ ಸಂಘಟನೆಗಳು

ADVERTISEMENT

ಬಾಯಿ ಮುಚ್ಚಿಕೊಂಡು ತೆಪ್ಪಗಿರಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯ ದಮನ ಮಾಡಿದವರಿಗೆ ಯಾವ ಗತಿ ಒದಗಿದೆ ಎಂಬುದಕ್ಕೆ ಇತಿಹಾಸದಲ್ಲಿ ಹಲವು ನಿದರ್ಶನಗಳಿವೆ. ಪುರಭವನದ ಬಳಿ ನಡೆದ ಪ್ರದರ್ಶನಗಳಲ್ಲಿ ಶೇ 90ರಷ್ಟು ಅಹಿಂಸಾತ್ಮಕವಾಗಿ ನಡೆದುಕೊಂಡು ಬರುತ್ತಿರುವಾಗ ಈ ಬಗೆಯ ಅನಗತ್ಯ ಅಧಿಕಾರ ಚಲಾವಣೆ ಏಕೆ? ಎಂದು ಪ್ರಶ್ನಿಸಿದ್ದಾರೆ.

ದಶಕಗಳಿಂದ ರೈತ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಚಳವಳಿ, ಪ್ರದರ್ಶನ, ಪ್ರತಿಭಟನೆ ನಡೆಸುತ್ತಾ ಬಂದಿದ್ದು, ಇವು ಪ್ರಜಾಪ್ರಭುತ್ವದ ಜೀವಂತಿಕೆಗೆ ಸಾಕ್ಷಿಯಾಗಿವೆ. ಇನ್ನು ಮುಂದೆ ಇವಕ್ಕೆಲ್ಲ ಕಡಿವಾಣ ಹಾಕುವ ಸಲುವಾಗಿ ₹10 ಲಕ್ಷ ಮೊತ್ತದ ಬಾಂಡ್ ನೀಡುವಂತೆ ಕೇಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಹಿಂಸೆಗೆ ತಿರುಗಿದ ಪ್ರತಿಭಟನೆಯನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ, ಅದು ಪೊಲೀಸರ ಅಸಮರ್ಪಕತೆಯನ್ನು ಎತ್ತಿ ತೋರಿಸುತ್ತದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.