ADVERTISEMENT

ಬೇಲ್‌ನಲ್ಲಿರುವ ಕಾಂಗ್ರೆಸ್‌ ನಾಯಕರು, ಮಾಡಿದ್ದುಣ್ಣೋ ಮಹಾರಾಯ: ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 11:37 IST
Last Updated 5 ಅಕ್ಟೋಬರ್ 2020, 11:37 IST
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ   

ಬೆಂಗಳೂರು: ಭಂಡತನಕ್ಕೆ ಕೊನೆಯುಂಟೆ? ಮಾಡಿದ್ದುಣ್ಣೋ ಮಹಾರಾಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಡಿ.ಕೆ. ಶಿವಕುಮಾರ್‌ ಮನೆ ಮತ್ತು ಕಚೇರಿ ಮೇಲಿನ ಸಿಬಿಐ ದಾಳಿಯನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿದ್ದಾರೆ.

ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂದೂ ಹೇಳಿರುವ ಅವರು, ಕಾಂಗ್ರೆಸ್‌ ನಾಯಕರ ಕುರಿತ ಸತ್ಯ ಸಂಗತಿ ಏನೆಂದರೆ, ಸೋನಿಯಾಗಾಂಧಿ, ರಾಹುಲ್‌ ಗಾಂಧಿ, ಪಿ. ಚಿದಂಬರಂ ಮತ್ತು ಡಿ.ಕೆ. ಶಿವಕುಮಾರ್‌ ಇವೆರಲ್ಲರೂ ಬೇಲ್‌( ಜಾಮೀನಿನ) ಮೇಲೆ ಹೊರಗಿದ್ದಾರೆ ಎಂದು ತಿಳಿಸಿದ್ದಾರೆ.

ಭಾರಿ ಭ್ರಷ್ಟಾಚಾರ ಮಾಡಿ ಸಿಕ್ಕಿಬಿದ್ದಿರುವ ಕಾಂಗ್ರೆಸ್‌ ನಾಯಕರು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ದೂರುತ್ತಿದ್ದಾರೆ. ರಾಹುಲ್‌ ಗಾಂಧಿಯವರ ಸ್ವರ್ಗದಲ್ಲಿ ತೇಲುತ್ತಿರುವ ಸುರ್ಜೇವಾಲ ಅವರು ಎಚ್ಚೆತ್ತುಕೊಳ್ಳಲು ಇದು ಸಕಾಲ. ಸುಳ್ಳುಗಳ ಸರದಾರ ಸುರ್ಜೇವಾಲ ತಮ್ಮ ಬುಟ್ಟಿಯ ತುಂಬಾ ಸುಳ್ಳಿನ ಕಂತೆಗಳನ್ನೇ ಇಟ್ಟುಕೊಂಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ADVERTISEMENT

ಸೋನಿಯಾ ನೇತೃತ್ವದ ಭ್ರಷ್ಟ ಕಾಂಗ್ರೆಸ್‌ ಪಕ್ಷ ತನ್ನ ವಿರೋಧಿಗಳನ್ನು ಬಗ್ಗು ಬಡಿಯಲು ಸಿಬಿಐ ಅನ್ನು ಬಳಸಿಕೊಂಡಿತ್ತು. ಡಿ.ಕೆ. ಶಿವಕುಮಾರ್‌ ಅವರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದಾಗ ಭಾರಿ ಮೊತ್ತದ ಹಣವನ್ನು ವಶಕ್ಕೆ ತೆಗೆದುಕೊಂಡಿಲ್ಲವೆ ಎಂದೂ ಪ್ರಶ್ನಿಸಿದ್ದಾರೆ.

ಅಕ್ರಮಗಳ ಸರದಾರನನ್ನು ಜೈಲಿನಿಂದ ಮೆರವಣಿಗೆ ಮಾಡಿಕೊಂಡು ಬಂದು ಪಟ್ಟ ನೀಡುವಾಗಲೇ ಯೋಚಿಸಬೇಕಿತ್ತು. ತನಿಖಾ ಸಂಸ್ಥೆಗಳು ಸ್ವಾಯತ್ತವಾಗಿರುತ್ತವೇ ಎಂಬುದು ಲೋಕಸತ್ಯ. ಸಿಬಿಐ ದಾಳಿ ಖಂಡಿಸುವ ಕಾಂಗ್ರೆಸ್‌ ಪಕ್ಷ ಡಿ.ಕೆ. ಶಿವಕುಮಾರ್ ಅವರ ಅಕ್ರಮಗಳನ್ನು ಏಕೆ ಖಂಡಿಸುವುದಿಲ್ಲ ಎಂದು ಬಿಜೆಪಿ ಕೂಡ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.