ಬೆಂಗಳೂರು: ನ್ಯಾಯಾಂಗದ ಕುರಿತು ಮಾತನಾಡಿರುವ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹಾಗೂ ಬಿಜೆಪಿ ರಾಷ್ಟ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹೇಳಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಶನಿವಾರ ಮೌನ ಪ್ರತಿಭಟನೆ ನಡೆಸಿದರು.
ಆನಂದರಾವ್ ವೃತ್ತದ ಕಾಂಗ್ರೆಸ್ ಕಚೇರಿ ಎದುರು ಅಂತರ ಕಾಯ್ದುಕೊಂಡು ಸೇರಿದ್ದ ಕಾರ್ಯಕರ್ತರು, ಡಿ.ವಿ. ಸದಾನಂದಗೌಡ ಹಾಗೂ ಸಿ.ಟಿ. ರವಿ ಮುಖವಾಡ ಧರಿಸಿ ಅವರಿಬ್ಬರ ಹೇಳಿಕೆಯನ್ನು ಖಂಡಿಸಿದರು.
‘ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಮ್ಮ ವೈಫಲ್ಯವನ್ನು ಮರೆಮಾಚಿಕೊಳ್ಳಲು ನ್ಯಾಯಾಂಗದ ತೀರ್ಮಾನಗಳನ್ನೇ ಟೀಕಿಸುವ ಕೀಳುಮಟ್ಟಕ್ಕೆ ಇಳಿದಿವೆ’ ಎಂದೂ ಕಾರ್ಯಕರ್ತರು ದೂರಿದರು.
‘ಕೋವಿಡ್ ಲಸಿಕೆ ಅಭಿಯಾನ ನಡೆಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ಅಭಿಯಾನದ ಬಗ್ಗೆ ಸ್ಪಷ್ಟ ಮಾಹಿತಿ ನೀಡದೆ ಜನರನ್ನು ಗೊಂದಲದಲ್ಲಿ ಸಿಲುಕಿಸಿವೆ. ಕೋವಿಡ್ನಿಂದ ಇಡೀ ದೇಶ ನಲುಗುತ್ತಿರುವುದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತ ವೈಫಲ್ಯವೇ ಮುಖ್ಯ ಕಾರಣ’ ಎಂದೂ ಹೇಳಿದರು.
‘ಸರ್ಕಾರಗಳ ವೈಫಲ್ಯವನ್ನು ಎತ್ತಿ ತೋರಿಸಿದ ನ್ಯಾಯಮೂರ್ತಿಗಳನ್ನೇ, ‘ಅವರೇನು ಸರ್ವಜ್ಞರಾ’ ಎಂದು ಸಿ.ಟಿ. ರವಿ ಪ್ರಶ್ನಿಸಿದ್ದಾರೆ. ‘ಆಮ್ಲಜನಕ ದೊರಕದಿದ್ದರೆ ನೇಣು ಹಾಕಿಕೊಳ್ಳಬೇಕಾ ನಾನು’ ಎಂದು ಡಿ.ವಿ. ಸದಾನಂದ ಗೌಡ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಇವರಿಬ್ಬರ ಹೇಳಿಕೆಗಳು ನ್ಯಾಯಾಂಗ ನಿಂದನೆಯಾಗುತ್ತವೆ. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು’ ಎಂದೂ ಒತ್ತಾಯಿಸಿದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.