ಬೊಮ್ಮನಹಳ್ಳಿ: ಮತದಾರರ ಪಟ್ಟಿಯಲ್ಲಿ ನೈಜ ಮತದಾರರನ್ನು ಕೈಬಿಟ್ಟಿರುವುದನ್ನು ಖಂಡಿಸಿ ಬೊಮ್ಮನಹಳ್ಳಿಯ ವಿವೇಕಾನಂದ ವೃತ್ತದ ಬಳಿ ಕಾಂಗ್ರೆಸ್ ಕಾರ್ಯಕರ್ತರುಬುಧವಾರ ಪ್ರತಿಭಟನೆ ನಡೆಸಿದರು.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಸುಮಾರು 31 ಸಾವಿರ ಮತದಾರರನ್ನು ಕೈಬಿಡಲಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಅಲ್ಪಸಂಖ್ಯಾತರು ಮತ್ತು ದಲಿತರನ್ನು ಗುರಿಯಾಗಿಸಿ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ವಿವೇಕಾನಂದ ವೃತ್ತದಿಂದ ಬಿಬಿಎಂಪಿ ಕಚೇರಿ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಜಂಟಿ ಆಯುಕ್ತರಿಗೆ ಮನವಿ ನೀಡಿದರು. ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರನ್ನು ಕಚೇರಿಯ ಒಳಹೋಗದಂತೆ ಪೊಲೀಸರು ಗೇಟ್ಗೆ ಬೀಗ ಹಾಕಿ ತಡೆದರು. ಇದಕ್ಕೆ ಆಕ್ಷೇಪಿಸಿದ ಕಾರ್ಯಕರ್ತರು, ಒಳಬಿಡುವಂತೆ ಒತ್ತಾಯಿಸಿದರು. ಕೊನೆಗೆ ಪ್ರಮುಖ ಮುಖಂಡರನ್ನಷ್ಟೇ ಒಳಬಿಟ್ಟರು.
ಪಾಸ್ ವರ್ಡ್ ಸೋರಿಕೆ ಆರೋಪ: 'ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಂದಾಯ ನಿರೀಕ್ಷಕರು ಇಲಾಖೆಯ ಪಾಸ್ ವರ್ಡ್ ನ್ನು ಬಿಜೆಪಿಯವರಿಗೆ ನೀಡಿದ್ದು, ಅವರೇ ಮತದಾರರನ್ನು ಪಟ್ಟಿಯಿಂದ ತೆಗೆದಿದ್ದಾರೆ, ಈ ಬಗ್ಗೆ ತನಿಖೆಯಾಗಬೇಕೆಂದು' ಪ್ರತಿಭಟನಾಕಾರರು ಆಗ್ರಹಿಸಿದರು.
ಹೆಚ್ಎಸ್ಆರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಾಸುದೇವರೆಡ್ಡಿ, ಬೊಮ್ಮನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಮಾತನಾಡಿದರು.
ಬಿಳೇಕಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥನಾರಾಯಣ, ಯುವ ಕಾಂಗ್ರೆಸ್ ಮುಖಂಡ ಅನಿಲ್ ರೆಡ್ಡಿ, ಕಾಂಗ್ರೆಸ್ ಮುಖಂಡರಾದ ನಾಗಭೂಷಣ್ ರೆಡ್ಡಿ, ಚಿನ್ಮಯ ವಿದ್ಯಾಸಂಸ್ಥೆ ಮುಖ್ಯಸ್ಥ ವಾಸುದೇವರೆಡ್ಡಿ, ಮಂಗಮ್ಮನಪಾಳ್ಯ ವಾರ್ಡ್ ಮುಖಂಡ ರಾಘವೇಂದ್ರ, ಅಲ್ಪಸಂಖ್ಯಾತ ವಿಭಾಗದ ಮುಖ್ಯಸ್ಥ ಸಯ್ಯದ್ ಸರ್ದಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.