ಬೆಂಗಳೂರು: ‘ಸಂಕಷ್ಟಕ್ಕೀಡಾಗುವ ದೇಶದ ಎಲ್ಲ ಜನರ ಧ್ವನಿಯಾಗಿ ಕಾಂಗ್ರೆಸ್ ಪಕ್ಷ ಕಾರ್ಯನಿರ್ವಹಿಸಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ವಿಡಿಯೊ ತುಣುಕಿನ ಮೂಲಕ ಟ್ವೀಟ್ ಮಾಡಿರುವ ಅವರು, ‘ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಕೃಷಿ ಮಸೂದೆಗಳಿಂದಾಗಿ ರೈತರು, ಕಾರ್ಮಿಕರು ಸಂಕಷ್ಟದಲ್ಲಿದ್ದು, ಕಾಂಗ್ರೆಸ್ ಅವರೆಲ್ಲರ ಧ್ವನಿಯಾಗಿ ನಿಂತಿದೆ. ಅದರ ಭಾಗವಾಗಿ, ಸಹಿ ಅಭಿಯಾನ ನಡೆಸಿ, ರಾಷ್ಟ್ರಪತಿಗೆ ಮನವಿ ಸಲ್ಲಿಸಲು ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಸಂಕಲ್ಪ ಮಾಡಿದ್ದಾರೆ’ ಎಂದಿದ್ದಾರೆ.
‘ನೊಂದವರ ಧ್ವನಿಯನ್ನು ರಾಷ್ಟ್ರಪತಿಗೆ ತಲುಪಿಸುವ ಪ್ರಯತ್ನವಾಗಿ ಪಕ್ಷ ಈ ಅಭಿಯಾನ ಆರಂಭಿಸಿದೆ. ಬೂತ್ಮಟ್ಟದಲ್ಲಿ ನಡೆಯಲಿರುವ ಅಭಿಯಾನದಲ್ಲಿ ರೈತರು, ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಕನಿಷ್ಠ ಐದು ಕೋಟಿ ಜನರ ಸಹಿ ಸಂಗ್ರಹಿಸುವ ಪ್ರಯತ್ನ ನಡೆದಿದೆ. ಪಕ್ಷದ ಕಾರ್ಯಕರ್ತರು ಮುಖಂಡರು, ಸಾಮಾನ್ಯ ನಾಗರಿಕರು ಮತ್ತು ಎಲ್ಲ ವರ್ಗದ ಜನರು ಈ ಪಾಲ್ಗೊಳ್ಳಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.