ADVERTISEMENT

ದರೋಡೆಗೆ ಸಂಚು: ರೌಡಿಶೀಟರ್ ಸಹಿತ ಆರು ಮಂದಿಯ ಬಂಧನ

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 7:42 IST
Last Updated 23 ಜುಲೈ 2020, 7:42 IST
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು   

ಬೆಂಗಳೂರು: ಸಾರ್ವಜನಿಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ದರೋಡೆಗೆ ಸಂಚು ರೂಪಿಸುತ್ತಿದ್ದ ರೌಡಿಶೀಟರ್‌ ಸಹಿತ ಆರು ಮಂದಿಯ ತಂಡವನ್ನು ಕೇಂದ್ರ ಅಪರಾಧ ದಳದ ಪೊಲೀಸರು (ಸಿಸಿಬಿ) ಯಲಹಂಕ ನ್ಯೂ ಟೌನ್‌ ಪೊಲೀಸ್‌ ಠಾಣಾ ವ್ಯಾಪ್ತಿಯಿಂದ ಬಂಧಿಸಿದ್ದಾರೆ.

ಯಲಹಂಕದ ಸುಭೇದಾರ್‌ ಪಾಳ್ಯದ ರವಿಶಂಕರ್ (28), ರಾಮಗೊಂಡನಹಳ್ಳಿಯ ಶರತ್ ಬಾಬು (24), ಯಲಚೇನಹಳ್ಳಿಯ ದೀಪಕ್‌ ಕುಮಾರ್‌ (20), ಅಟ್ಟೂರ್‌ ಲೇಔಟ್‌ ನಿವಾಸಿಗಳಾದ ಕೀರ್ತಿರಾಜ್‌ (22) ಮತ್ತು ಸಂತೋಷ್ (22), ಯಲಹಂಕದ ಅನಂತಪುರದ ಗಿಲ್ಬರ್ಟ್‌ (21) ಬಂಧಿತರು. ಆರೋಪಿಗಳಿಂದ 29 ಇಂಚು ಉದ್ದದ ಮರ ಹಿಡಿಕೆ, ಕಬ್ಬಿಣದ ಲಾಂಗ್‌, ಚಾಕು, ದೊಣ್ಣೆ ಸೇರಿದಂತೆ ಹಲವು ವಿಧದ ಮಾರಕಾಸ್ತ್ರಗಳು, ಮಾರುತಿ ಕಾರು, ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

ಬಾಣಸವಾಡಿ ಪೊಲೀಸ್‌ ಠಾಣೆಯ ರೌಡಿಶೀಟರ್‌ ಪಟ್ಟಿಯಲ್ಲಿರುವ ರವಿಶಂಕರ್‌ ವಿರುದ್ಧ ಬಾಣಸವಾಡಿ ಠಾಣೆಯಲ್ಲಿ ಒಂದು ಕೊಲೆ, ರಾಮಮೂರ್ತಿನಗರ, ಯಲಹಂಕ ನ್ಯೂ ಟೌನ್‌ ಮತ್ತು ಬಾಣಸವಾಡಿ ಪೊಲೀಸ್‌ ಠಾಣೆಗಳಲ್ಲಿ ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ. ಶರತ್‌ಬಾಬು ವಿರುದ್ಧ ಯಲಹಂಕ ನ್ಯೂಟೌನ್‌ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಪ್ರಕರಣ, ದೀಪಕ್‌ ಮತ್ತು ಕೀರ್ತಿರಾಜ್ ವಿರುದ್ಧ ಅದೇ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿವೆ.

ADVERTISEMENT

ಬಂಧಿತರ ವಿರುದ್ಧ ಯಲಹಂಕ ನ್ಯೂ ಟೌನ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.