ADVERTISEMENT

ಬ್ಯೂಟಿಪಾರ್ಲರ್‌ ತೆರೆಯಲು ಯುವತಿ ತಂದಿದ್ದ ಹಣ ದರೋಡೆ ಮಾಡಿದ ಕಾನ್‌ಸ್ಟೆಬಲ್: FIR

​ಪ್ರಜಾವಾಣಿ ವಾರ್ತೆ
Published 16 ಮೇ 2025, 15:00 IST
Last Updated 16 ಮೇ 2025, 15:00 IST
ಗಿರಿಜೇಶ್‌ 
ಗಿರಿಜೇಶ್‌    

ಬೆಂಗಳೂರು: ಬ್ಯೂಟಿ ಪಾರ್ಲರ್‌ ಆರಂಭಿಸಲು ಶಿವಮೊಗ್ಗದಿಂದ ನಗರಕ್ಕೆ ಬಂದಿದ್ದ ಯುವತಿ ಬಳಿಯಿದ್ದ ಚಿನ್ನಾಭರಣ ಹಾಗೂ ನಗದನ್ನು ದರೋಡೆ ನಡೆಸಿದ ಆರೋಪದಡಿ ಹೆಡ್‌ ಕಾನ್‌ಸ್ಟೆಬಲ್‌ ಒಬ್ಬರ ವಿರುದ್ಧ ಬಾಗಲಗುಂಟೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಎಂ.ಎಸ್‌. ಪಾಳ್ಯದ ನಿವಾಸಿ ಸಿಂಚನಾ ಅವರು ನೀಡಿದ ದೂರಿನ ಆಧಾರದಲ್ಲಿ ನೆಲಮಂಗಲ ಗ್ರಾಮಾಂತರ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಗಿರಿಜೇಶ್‌ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

‘ಗಿರಿಜೇಶ್‌ಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ. ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಸಂಗ್ರಹಿಸಲಾಗುತ್ತಿದೆ. ದರೋಡೆ ನಡೆಸಿದ್ದಕ್ಕೆ ಸಾಕ್ಷ್ಯಗಳು ಲಭಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಹೇಳಿದರು.

ADVERTISEMENT

‘ಶಿವಮೊಗ್ಗದ ಸಿಂಚನಾ ಅವರು ನಗರದ ಎಂ.ಎಸ್‌.ಪಾಳ್ಯದಲ್ಲಿ ನೆಲಸಿದ್ದರು. ಆರಂಭದಲ್ಲಿ ಶಿವಮೊಗ್ಗದಲ್ಲೇ ಬ್ಯೂಟೀಷಿಯನ್‌ ಕೆಲಸ ಮಾಡುತ್ತಿದ್ದರು. ಐದು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಅವರು, ಕೊಡಿಗೆಹಳ್ಳಿಯ ‘ರಾಯಲ್‌ ಲೈಫ್‌’ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. 15 ದಿನಗಳ ಹಿಂದೆ ಊರಿಗೆ ತೆರಳಿದ್ದ ಅವರು ಸ್ವಂತವಾಗಿ ಬ್ಯೂಟಿ ಪಾರ್ಲರ್‌ ಆರಂಭಿಸುವ ಉದ್ದೇಶದಿಂದ ತಾಯಿಯಿಂದ ₹2.50 ಲಕ್ಷ ನಗದು ಪಡೆದುಕೊಂಡಿದ್ದರು. ಅಲ್ಲದೇ ಅಡಮಾನ ಇಟ್ಟು ಸಾಲ ಪಡೆದುಕೊಳ್ಳಲು ತಾಯಿ ಬಳಿಯಿದ್ದ ಚಿನ್ನದ ಸರವನ್ನೂ ತೆಗೆದುಕೊಂಡು, ಮೇ 13ರ ಸಂಜೆ 6ರ ಸುಮಾರಿಗೆ ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರಯಾಣ ಆರಂಭಿಸಿದ್ದರು. ಕೆಎಸ್‌ಆರ್‌ಟಿಸಿ ಬಸ್‌ ತಡರಾತ್ರಿ 1.30ರ ಸುಮಾರಿಗೆ ತುಮಕೂರು ರಸ್ತೆಯ ಎಂಟನೇ ಮೈಲಿ ತಲುಪಿತ್ತು. ಅಲ್ಲಿ ಇಳಿದಿದ್ದ ಸಿಂಚನಾ ಅವರು, ಮೊಬೈಲ್‌ ಚಾರ್ಜ್‌ ಮಾಡಿಕೊಳ್ಳಲು ಜಂಕ್ಷನ್‌ ಬಳಿಯ ಪ್ರಕ್ರಿಯಾ ಆಸ್ಪತ್ರೆ ಬಳಿಗೆ ಹೋಗಿದ್ದರು’ ಎಂದು ಪೊಲೀಸರು ಹೇಳಿದರು.

ಡ್ರಾ ಕೊಡುವ ನೆಪದಲ್ಲಿ ದರೋಡೆ: ‘ತಡರಾತ್ರಿ ಪೊಲೀಸ್‌ ಜೀಪಿನಲ್ಲಿ ಬಂದಿದ್ದ ಆರೋಪಿ ಕಾನ್‌ಸ್ಟೆಬಲ್‌, ಯಾಕೆ ಇಲ್ಲಿ ನಿಂತಿದ್ದೀಯಾ? ಎಲ್ಲಿಗೆ ಹೋಗಬೇಕು ಎಂದು ಪ್ರಶ್ನೆ ಮಾಡಿದ್ದರು. ಆಗ ಪೇಯಿಂಗ್‌ ಗೆಸ್ಟ್‌ಗೆ (ಪಿ.ಜಿ) ಹೋಗಬೇಕೆಂದು ಸಿಂಚನಾ ಪ್ರತಿಕ್ರಿಯಿಸಿದ್ದರು. ಜೀಪ್‌ನಲ್ಲೇ ಕರೆದುಕೊಂಡು ಹೋಗಿ ಬಿಡುತ್ತೇನೆ ಎಂಬುದಾಗಿ ಕಾನ್‌ಸ್ಟೆಬಲ್‌ ಹೇಳಿದ್ದರು. ಯುವತಿ ನಿರಾಕರಿಸಿದ್ದರು. ಆಕೆಗೆ ಗದರಿಸಿ ಜೀಪ್‌ಗೆ ಹತ್ತಿಸಿಕೊಂಡಿದ್ದರು. ಪಿ.ಜಿ ಕಡೆಗೆ ಹೋಗುವ ಬದಲಿಗೆ ವಾಹನವನ್ನು ನೆಲಮಂಗಲದ ಕಡೆಗೆ ತಿರುಗಿಸಿದ್ದರು. ನೆಲಮಂಗಲ ಪೊಲೀಸ್ ಠಾಣೆ ಸಮೀಪಕ್ಕೆ ಕರೆದೊಯ್ದು ಬ್ಯಾಗ್‌ ಅನ್ನು ಪರಿಶೀಲನೆ ನಡೆಸಿದ್ದರು. ಬ್ಯಾಗ್‌ನಲ್ಲಿದ್ದ ₹2.50 ಲಕ್ಷ ನಗದು ಹಾಗೂ ಚಿನ್ನದ ಸರವನ್ನು ಕಸಿದುಕೊಂಡರು. ವಿರೋಧ ವ್ಯಕ್ತಪಡಿಸಿದ್ದಕ್ಕೆ ಯುವತಿ ಮೇಲೆ ಹಲ್ಲೆ ನಡೆಸಲಾಗಿದೆ’ ಎಂದು ಮೂಲಗಳು ಹೇಳಿವೆ.

ತಪ್ಪಿಸಿಕೊಂಡು ಬಂದ ಯುವತಿ: ‘ಜೀಪ್‌ನ ಬಾಗಿಲು ತೆಗೆದು ತುಮಕೂರು ರಸ್ತೆಗೆ ಓಡಿಬಂದಿದ್ದ ಯುವತಿ ದ್ವಿಚಕ್ರ ವಾಹನ ಸವಾರನನ್ನು ಕೇಳಿಕೊಂಡು ಎಂಟನೇ ಮೈಲಿಗೆ ಡ್ರಾಪ್‌ ಪಡೆದುಕೊಂಡಿದ್ದರು’ ಎಂದು ಮೂಲಗಳು ತಿಳಿಸಿವೆ. ‘ಎಂಟನೇ ಮೈಲಿಗೆ ತಲುಪಿದಾಗ ಮುಂಜಾನೆ ನಾಲ್ಕು ಗಂಟೆ ಆಗಿತ್ತು. ನಂತರ ಬಿಎಂಟಿಸಿ ಬಸ್‌ನಲ್ಲಿ ಪಿ.ಜಿಗೆ ತೆರಳಿದ್ದೆ. ಹಣ ಹಾಗೂ ಚಿನ್ನಾಭರಣ ದರೋಡೆ ನಡೆಸಿದ್ದ ವ್ಯಕ್ತಿ ಖಾಕಿ ಸಮವಸ್ತ್ರ ಧರಿಸಿದ್ದರು’ ಎಂದು ಸಿಂಚನಾ ಅವರು ದೂರಿನಲ್ಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.