ADVERTISEMENT

ಕಿದ್ವಾಯಿ: ನಿರಂತರ ಅಸ್ಥಿಮಜ್ಜೆ ಕಸಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2025, 16:04 IST
Last Updated 29 ಜನವರಿ 2025, 16:04 IST
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ   

ಬೆಂಗಳೂರು: ಕ್ಯಾನ್ಸರ್ ಪೀಡಿತ ಬಡರೋಗಿಗಳಿಗೆ ನಿರಂತರ ಅಸ್ಥಿಮಜ್ಜೆ ಕಸಿ ನಡೆಸಲಾಗುತ್ತಿದ್ದು, ಹಂತ ಹಂತವಾಗಿ ಏಳು ವಯಸ್ಕರಿಗೆ ಮುಂದಿನ ವಾರ ಅಸ್ಥಿಮಜ್ಜೆ ಕಸಿ ನಡೆಸಲಾಗುತ್ತದೆ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ತಿಳಿಸಿದೆ. 

‘ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ಸಂಸ್ಥೆಯು, ಕ್ಯಾನ್ಸರ್ ರೋಗಿಗಳಿಗೆ ಉತ್ತಮ ಚಿಕಿತ್ಸೆ ಹಾಗೂ ಆರೈಕೆಯಲ್ಲಿ ಮುಂಚೂಣಿಯಲ್ಲಿದೆ. ಇತ್ತೀಚೆಗೆ ‘ಅಟೋಲೋಗಸ್’ ಮತ್ತು ‘ಅಲೋಜೆನಿಕ್’ ಅಸ್ಥಿಮಜ್ಜೆ ಕಸಿಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಬಡ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿರುವ ಏಕೈಕ ಸರ್ಕಾರಿ ಆಸ್ಪತ್ರೆ ಇದಾಗಿದೆ. ಈವರೆಗೆ 105 ಮಂದಿಗೆ ಯಶಸ್ವಿಯಾಗಿ ಅಸ್ಥಿಮಜ್ಜೆ ಕಸಿ ನಡೆಸಲಾಗಿದೆ. ರೋಗಿಗಳು ಆಸ್ಪತ್ರೆಗೆ ಬರುವ ದಿನದಂದೇ ನೋಂದಣಿ ಮಾಡಿ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ವೈದ್ಯಕೀಯ ಪರೀಕ್ಷೆಗಳು ನಡೆದ ಬಳಿಕ ಅಸ್ಥಿಮಜ್ಜೆ ಕಸಿ ನಡೆಸಲಾಗುತ್ತದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ. ರವಿ ಅರ್ಜುನ್ ತಿಳಿಸಿದ್ದಾರೆ.

‘ಅಸ್ಥಿಮಜ್ಜೆ ಕಸಿ ಚಿಕಿತ್ಸೆಗೆ ಒಳಪಡುವ ರೋಗಿಗಳಿಗೆ ಬೇಕಾದ ಔಷಧಗಳು ಆಸ್ಪತ್ರೆಯ ಆವರಣದಲ್ಲಿರುವ ಕೇಂದ್ರೀಯ ಔಷಧ ಉಗ್ರಾಣ ಹಾಗೂ ಕಿದ್ವಾಯಿ ಡ್ರಗ್ಸ್ ಫೌಂಡೇಶನ್‌ನಲ್ಲಿ ಲಭ್ಯವಿರುತ್ತವೆ. ಎಲ್ಲ ತರಹದ ಔಷಧಗಳನ್ನು ಮುಂಚಿತವಾಗಿ ದಾಸ್ತಾನು ಮಾಡಲಾಗುತ್ತಿದೆ. ರೋಗಿಗಳ ನೋಂದಣಿಯನ್ನು ನಿರಾಕರಿಸುವುದಿಲ್ಲ. ನೋಂದಣಿ ಪ್ರಕ್ರಿಯೆಯನ್ನೂ ಸ್ಥಗಿತಗೊಳಿಸಿಲ್ಲ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ADVERTISEMENT

ಕಿದ್ವಾಯಿ ಸಂಸ್ಥೆಯಲ್ಲಿ ನಡೆಯುತ್ತಿರುವ ಅಸ್ಥಿಮಜ್ಜೆ ಕಸಿಗೆ ಸಂಬಂಧಿಸಿದಂತೆ ‘ಅಸ್ಥಿಮಜ್ಜೆ ಕಸಿಗೂ ತೊಡಕು’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಬುಧವಾರ ವಿಶೇಷ ವರದಿ ಪ್ರಕಟವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.