ಬೆಂಗಳೂರು: ‘ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ತುರ್ತಾಗಿ ಅಗತ್ಯವಲ್ಲದ ಚಿಕಿತ್ಸೆಯನ್ನು ಮುಂದೂಡಿ’ ಎಂದುಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯನಿರ್ದೇಶಕ ಡಾ.ಸಿ. ರಾಮಚಂದ್ರ ಮನವಿ ಮಾಡಿದ್ದಾರೆ.
‘ಕ್ಯಾನ್ಸರ್ನಿಂದ ಬಳಲುತ್ತಿರುವವರಿಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಇಂಥವರಿಗೆ ಕೊರೊನಾ ಸೋಂಕು ತಗುಲಿದರೆ ಜೀವಕ್ಕೆ ಅಪಾಯವಾಗಲಿದೆ.ಅದರಲ್ಲೂ ರೇಡಿಯೋಥೆರಪಿ, ಕಿಮೊಥೆರಪಿ ಚಿಕಿತ್ಸೆ ಪಡೆಯುವವರಿಗೆ ಸೋಂಕು ಬಂದರೆ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತದೆ. ಚಿಕಿತ್ಸೆಗಳನ್ನು ಒಂದೆರಡು ವಾರ ಮುಂದೂಡಿದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ತುರ್ತು ಚಿಕಿತ್ಸೆಗಳು ಅಗತ್ಯವಿದ್ದರೆ ಮಾತ್ರ ಸಂಸ್ಥೆಗೆ ಬನ್ನಿ’ ಎಂದು ತಿಳಿಸಿದ್ದಾರೆ.
‘ಈ ಸೋಂಕು ಒಬ್ಬರಿಗೆ ತಗುಲಿದರೆ ಅವರ ಕುಟುಂಬದವರಿಗೂ ಸುಲಭವಾಗಿ ಹರಡುತ್ತದೆ. ಹೀಗಾಗಿ ಮನೆಯಿಂದ ಹೊರಗೆ ಬರುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಉಸಿರಾಟದ ತೊಂದರೆ, ರಕ್ತಸ್ರಾವ, ಹೊಟ್ಟೆ ಉಬ್ಬರ ಮೊದಲಾದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೆ ಆಸ್ಪತ್ರೆಗೆ ತೆರಳಿ, ಪರೀಕ್ಷೆ ಮಾಡಿಸಿಕೊಳ್ಳಬೇಕು. ನಾವು ಕೂಡ ತುರ್ತು ಚಿಕಿತ್ಸೆ ಅಗತ್ಯವಿರುವವರಿಗೆ ಸೇವೆ ನೀಡಲು 24 ಗಂಟೆಯೂ ಸಿದ್ಧರಿರುತ್ತೇವೆ. ಹಾಗಂತ ಅನವಶ್ಯಕವಾಗಿ ಬಂದು ಎಲ್ಲರಿಗೂ ತೊಂದರೆ ಮಾಡಬೇಡಿ’ ಎಂದಿದ್ದಾರೆ.
‘ಸಂಸ್ಥೆಯಲ್ಲಿ ಸದ್ಯ ರೋಗಿಗಳು ಹಾಗೂ ಸಿಬ್ಬಂದಿ ಸೇರಿ ಒಟ್ಟು 4ಸಾವಿರ ಮಂದಿ ಇದ್ದಾರೆ. ಕೋವಿಡ್–19 ಭೀತಿಯಿಂದಾಗಿ ಆಸ್ಪತ್ರೆಗೆ ಬರುವ ರೋಗಿಗಳ ಪ್ರಮಾಣದಲ್ಲಿ ಶೇ 90 ರಷ್ಟು ಇಳಿಕೆಯಾಗಿದೆ. ಕೆಲವರು ಸಣ್ಣ ಚಿಕಿತ್ಸೆಗಳನ್ನು ಮಾಡಿಸಿಕೊಳ್ಳಲು ಬರುತ್ತಿದ್ದಾರೆ. ಈ ರೀತಿ ಬರಬಾರದು ಎಂದು ಸೂಚಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.