ADVERTISEMENT

ಕೋವಿಡ್-19 | ಬೆಂಗಳೂರಿನಲ್ಲಿ ಒಂದೇ ದಿನ 10 ಪ್ರಕರಣ

ಪಾದರಾಯನಪುರದಲ್ಲಿ 8 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2020, 21:49 IST
Last Updated 30 ಏಪ್ರಿಲ್ 2020, 21:49 IST
   

ಬೆಂಗಳೂರು: ಪಾದರಾಯನಪುರದಲ್ಲಿ ಎಂಟು ಪ್ರಕರಣಗಳು ಸೇರಿದಂತೆ ನಗರದಲ್ಲಿ ಗುರುವಾರ ಒಂದೇ ದಿನ 10 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದರಿಂದಾಗಿ ನಗರದಲ್ಲಿ ಸೋಂಕಿತರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ.

ಕಳೆದ ನಾಲ್ಕು ದಿನಗಳಿಂದ ನಗರದಲ್ಲಿ ಒಂದು ಕೋವಿಡ್ ಪ್ರಕರಣ ಮಾತ್ರ ವರದಿಯಾಗಿತ್ತು. ಇದರಿಂದಾಗಿ ಸೋಂಕಿನ ಆತಂಕ ತಕ್ಕಮಟ್ಟಿಗೆ ದೂರವಾಗಿತ್ತು. ಅದರಲ್ಲೂ ಹೊಂಗಸಂದ್ರ ಹಾಗೂ ಪಾದರಾಯನಪುರದಲ್ಲಿ ಸೋಂಕು ನಿಯಂತ್ರಣಕ್ಕೆ ಬಂದದ್ದು ಅಧಿಕಾರಿಗಳೂ ನಿರಾಳರಾಗುವಂತೆ ಮಾಡಿತ್ತು. ಆದರೆ, ಹೊಸದಾಗಿ ವರದಿಯಾದ ಪ್ರಕರಣಗಳಲ್ಲಿ ಪಾದರಾಯನಪುರದ ಪಾಲೇ ಅಧಿಕ ಇರುವುದು ಅಲ್ಲಿನ ಪರಿಸ್ಥಿತಿ ಇನ್ನಷ್ಟು ಹದಗೆಡುವಂತೆ ಮಾಡಿದೆ. ಅಲ್ಲಿ ಈವರೆಗೆ ಒಟ್ಟು 31 ಪ್ರಕರಣಗಳು ವರದಿಯಾಗಿವೆ.

ಪಾದರಾಯನಪುರದ 292ನೇ ರೋಗಿಯೊಂದಿಗಿನ ಸಂಪರ್ಕದಿಂದ ಅಲ್ಲಿನ ನಾಲ್ಕು ವರ್ಷದ ಬಾಲಕಿ, 15 ವರ್ಷದ ಬಾಲಕ, 60 ವರ್ಷದ ಮಹಿಳೆ, 16 ವರ್ಷ ಹಾಗೂ 13 ವರ್ಷದ ಬಾಲಕಿಗೆ ಸೋಂಕು ತಗುಲಿದೆ. ಅಲ್ಲಿ ಸಂಚಾರ ನಡೆಸಿದ 20 ವರ್ಷ ಹಾಗೂ 28 ವರ್ಷದ ಯುವಕರಿಗೆ ಸೋಂಕು ಹರಡಿದೆ. 281ನೇ ರೋಗಿಯ ಸಂಪರ್ಕದಿಂದ 35 ವರ್ಷದ ಪುರುಷ ಸೋಂಕಿತರಾಗಿದ್ದಾರೆ.

ADVERTISEMENT

ದೀಪಾಂಜಲಿ ನಗರದ 63 ವರ್ಷದ ವೃದ್ಧನಿಗೆ ಸೋಂಕು ದೃಢಪಟ್ಟಿದೆ. ಯಾರಿಂದ ಬಂದಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಮೃತ ಮಹಿಳೆಯಿಂದ (ರೋಗಿ-465) ಸೋಂಕು ಬಂದಿರುವ ಬಗ್ಗೆ ಸ್ಥಳೀಯ ನಿವಾಸಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.ಕಳೆದ 10 ದಿನಗಳಿದ ವೃದ್ಧ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರು.ಬಿಳೇಕಹಳ್ಳಿ ವಾರ್ಡ್‍ನ ಕೋಡಿಚಿಕ್ಕನಹಳ್ಳಿಯ 64 ವರ್ಷದ ವೃದ್ಧೆಗೆ ಸೋಂಕು ಖಚಿತವಾಗಿದೆ. ಫ್ಲೂ ಮಾದರಿಯ ಸೋಂಕಿನಿಂದ ಬಳಲುತ್ತಿದ್ದ ಅವರು, ಅಪೋಲೊ ಹಾಗೂ ಮಣಿಪಾಲ್ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಂಡಿದ್ದರು.ವೃದ್ಧೆಯ ಮಗ, ಸೊಸೆ ಸೇರಿದಂತೆ ಕುಟುಂಬದ 7 ಮಂದಿಯನ್ನು ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಮೂವರು ಗುಣಮುಖ: ಗುರುವಾರ ಮೂವರು ಚೇತರಿಸಿಕೊಂಡು ಅಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದರಿಂದ ನಗರದಲ್ಲಿ ಗುಣಮುಖರಾದವರ ಸಂಖ್ಯೆ 61ಕ್ಕೆ ತಲುಪಿದೆ. ಸದ್ಯ 74 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸೋಂಕು ಶಂಕೆ ಹಿನ್ನೆಲೆಯಲ್ಲಿ 43 ಮಂದಿಯನ್ನು ಹೊಸದಾಗಿ ದಾಖಲಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.