ADVERTISEMENT

ಸ್ಮಶಾನದಲ್ಲೇ ಉಪಹಾರ ಸೇವಿಸಿದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 22:14 IST
Last Updated 5 ಜೂನ್ 2021, 22:14 IST

ಬೆಂಗಳೂರು: ಕೋವಿಡ್ ಶವಗಳ ಅಂತ್ಯಸಂಸ್ಕಾರ ಮಾಡುವ ಸಿಬ್ಬಂದಿ ಜೊತೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರು ಶನಿವಾರ ಸ್ಮಶಾನದಲ್ಲೇ ಉಪಹಾರ ಸೇವಿಸಿದರು.

ತಾವರೆಕೆರೆಯ ಸ್ಮಶಾನಕ್ಕೆ ಶನಿವಾರ ಭೇಟಿ ನೀಡಿದ ಅವರು ಶವ ಸುಡುವ ಸಿಬ್ಬಂದಿಗೆ ಖುದ್ದು ಉಪಹಾರ ಬಡಿಸಿ, ಅವರ ಸಮಸ್ಯೆಗಳನ್ನು ಆಲಿಸಿದರು. ಪರಿಸರ ದಿನದ ಅಂಗವಾಗಿ ಸ್ಮಶಾನದ ಖಾಲಿ ಜಾಗದಲ್ಲಿ ಸಸಿ ನೆಟ್ಟು ವನಮಹೋತ್ಸವಕ್ಕೂ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು,‘ನಗರೀಕರಣದ ಭರದಲ್ಲಿ ಮರಗಳನ್ನು ಕಳೆದುಕೊಳ್ಳುತ್ತಿದ್ದೇವೆ.‌ ಒಬ್ಬ ವ್ಯಕ್ತಿಗೆ ಎಂಟು ಮರ ಇರಬೇಕು. ನಗರದ ಖಾಲಿ ಸ್ಥಳಗಳಲ್ಲಿ ಹೆಚ್ಚು ಸಸಿಗಳನ್ನು ನೆಟ್ಟು, ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು’ ಎಂದು ಹೇಳಿದರು.

ADVERTISEMENT

ಸ್ಮಶಾನಗಳ ನೌಕರರ ಒಕ್ಕೂಟದ ಸುರೇಶ್, ‘ಜಿಲ್ಲಾಧಿಕಾರಿಗಳು ನಮ್ಮೊಂದಿಗೆ ಕುಳಿತು ಊಟ ಮಾಡಿದ್ದಲ್ಲದೆ, ಸ್ವತಃ ತಿಂಡಿ ಬಡಿಸಿದ್ದಾರೆ. ನಮ್ಮ ಕಷ್ಟ-ಸುಖ ವಿಚಾರಿಸಿದ್ದಾರೆ. ನಮಗೆ ಬಹಳ ಸಂತೋಷವಾಗಿದೆ’ ಎಂದರು.

ಸ್ಮಶಾನ ಸಿಬ್ಬಂದಿಗೆ ದಿನಸಿ ಕಿಟ್‌ಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.