ಬೆಂಗಳೂರು: ಕೊರೊನಾ ಸೋಂಕಿತರು ಹಾಗೂ ಸೋಂಕು ಶಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಕಾರಣ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಕೋವಿಡ್ ಪ್ರಯೋಗಾಲಯದ ಪರೀಕ್ಷಾ ಸಾಮರ್ಥ್ಯವನ್ನು ದಿನಕ್ಕೆ 10 ಸಾವಿರಕ್ಕೆ ಏರಿಸಲಾಗಿದೆ.
ಸರ್ಕಾರವು ಪರೀಕ್ಷಾ ಸಾಮರ್ಥ್ಯ ಹೆಚ್ಚಳ ಮಾಡುವಂತೆ ಸೂಚಿಸಿದ್ದರಿಂದ ಸಂಸ್ಥೆಯು ಪ್ರಯೋಗಾಲಯವನ್ನು ಮೇಲ್ದರ್ಜೆಗೆ ಏರಿಸಿದೆ. ಗಂಟಲ ದ್ರವದ ಮಾದರಿಗಳ ಪರೀಕ್ಷೆಗೆ ಅತ್ಯಾಧುನಿಕ ಮಾಲಿಕ್ಯೂಲರ್ ಪ್ರಯೋಗಾಲಯವನ್ನು ಸಂಸ್ಥೆ ಬಳಸಿಕೊಂಡಿದೆ. ಚಿಕಿತ್ಸೆಗೆ ಬರುವ ಕ್ಯಾನ್ಸರ್ ರೋಗಿಗಳಿಗೆ ಕೋವಿಡ್ ಪರೀಕ್ಷೆ ನಡೆಸಿ,ಸೋಂಕು ಪತ್ತೆಯಾಗದಿದ್ದಲ್ಲಿ ರೇಡಿಯೋಥೆರಪಿ, ಕಿಮೋಥೆರಪಿ ಸೇರಿದಂತೆ ಅಗತ್ಯ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ನಗರದ ವಿವಿಧ ಆಸ್ಪತ್ರೆಗಳಲ್ಲಿ ಸಂಗ್ರಹಿಸಲಾದ ಕೋವಿಡ್ ಶಂಕಿತರ ಗಂಟಲ ದ್ರವದ ಮಾದರಿಗಳನ್ನು ಬಿಬಿಎಂಪಿ ಇಲ್ಲಿನ ಪ್ರಯೋಗಾಲಯಕ್ಕೆ ಕಳುಹಿಸುತ್ತಿದೆ.
ಈ ಮೊದಲು ಪ್ರತಿನಿತ್ಯ ಸರಾಸರಿ 3ಸಾವಿರ ಮಂದಿಯ ಗಂಟಲ ದ್ರವದ ಪರೀಕ್ಷೆ ನಡೆಸಲಾಗುತ್ತಿತ್ತು.
1.20 ಲಕ್ಷ ಪರೀಕ್ಷೆ: ‘ನಮ್ಮ ಪ್ರಯೋಗಾಲಯದಲ್ಲಿ ಅಲ್ಪಾವಧಿಯಲ್ಲಿಯೇ 1.20 ಲಕ್ಷ ಮಂದಿಯ ಗಂಟಲ ದ್ರವ ಪರೀಕ್ಷೆ ಮಾಡಲಾಗಿದೆ. ಅಗತ್ಯವಿರುವ10 ದತ್ತಾಂಶ ನಿರ್ವಾಹಕರು ಹಾಗೂ 10 ಕಂಪ್ಯೂಟರ್ಗಳನ್ನು ಸರ್ಕಾರ ಒದಗಿಸಿದೆ. ಅದೇ ರೀತಿ, ವಿವಿಧ ಸೌಲಭ್ಯವನ್ನು ಒದಗಿಸುವುದಾಗಿ ಸರ್ಕಾರ ಭರವಸೆ ನೀಡಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ. ರಾಮಚಂದ್ರ ತಿಳಿಸಿದರು.
‘ಜರ್ಮನಿಯಿಂದ ತಂದಿರುವ ಬೆಕ್ಮನ್ ಹೈಫೈವ್ ಹೆಸರಿನ ಯಂತ್ರ ಸೇರಿದಂತೆ ಪ್ರಯೋಗಾಲಯದಲ್ಲಿ ಮೂರು ಆರ್ಟಿಪಿಸಿಆರ್ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಮೊದಲು 10 ಸಾವಿರರಿಂದ 15 ಸಾವಿರ ಮಾದರಿಗಳು ಬಾಕಿ ಇರುತ್ತಿದ್ದವು' ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.