ಬೆಂಗಳೂರು: ಕೋವಿಡ್–19 ರೋಗಿಗಳ ಆರೈಕೆ ವಿಧಾನ, ತಪಾಸಣೆ, ರಕ್ತ ಹಾಗೂ ಗಂಟಲಿನ ದ್ರವದ ಮಾದರಿ ಸಂಗ್ರಹ, ಕ್ವಾರಂಟೈನ್ ಸೇರಿದಂತೆ ವಿವಿಧ ಮಾಹಿತಿ ನೀಡುವ ಯುಟ್ಯೂಬ್ ಚಾನಲ್ ಅನ್ನು ಆರೋಗ್ಯ ಇಲಾಖೆ ಪ್ರಾರಂಭಿಸಿದೆ.
‘ಜಾಗೃತಿ ಕರ್ನಾಟಕ’ ಹೆಸರಿನ ಯುಟ್ಯೂಬ್ ಚಾನಲ್ನಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ಆರೋಗ್ಯ ತಜ್ಞರು ನೀಡಿರುವ ಸಲಹೆ ಮತ್ತು ಸೂಚನೆಗಳ ವಿಡಿಯೊಗಳು ಕಾಣಸಿಗುತ್ತವೆ. ಸದ್ಯ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ 10 ವಿಡಿಯೊಗಳನ್ನು ಅಪ್ಲೋಡ್ ಮಾಡಲಾಗಿದೆ. ತಳಮಟ್ಟದಲ್ಲಿ ಆರೋಗ್ಯ ಪೂರೈಕೆದಾರರಿಗೆ ಸೂಕ್ತ ಜಾಗೃತಿ ಮೂಡಿಸುವುದು ಕೂಡ ಈ ಚಾನಲ್ ಆರಂಭದ ಮುಖ್ಯ ಉದ್ದೇಶ.
‘ಸೋಂಕು ಸಮುದಾಯಕ್ಕೆ ಹರಡುವುದನ್ನು ತಡೆಯಲು ಈ ಯುಟ್ಯೂಬ್ ಚಾನಲ್ ಸಹಾಯಕವಾಗಲಿದೆ. ಆರೋಗ್ಯ ಸೇವೆ ಪೂರೈಕೆದಾರರನ್ನು ಎರಡು ಹಾಗೂ ಮೂರನೇ ಹಂತದ ನಗರಗಳಿಗೆ ಕಳುಹಿಸುವುದು ಕಷ್ಟ. ಗ್ರಾಮೀಣ ಮಟ್ಟದಲ್ಲಿ ಕಾರ್ಯ ತಂಡಗಳನ್ನು ರಚಿಸಿ, ಅವರಿಗೆ ಬೇಕಾದ ತರಬೇತಿಯನ್ನು ವಿಡಿಯೊಗಳ ಮೂಲಕ ನೀಡಲಾಗುತ್ತದೆ. ಈ ಚಾನಲ್ಗೆ ಒಂದೂವರೆ ಲಕ್ಷ ಹಿಂಬಾಲಕರನ್ನು ಹೊಂದಿದ್ದೇವೆ’ ಎಂದು ಆರೋಗ್ಯ ಇಲಾಖೆ ಆಯುಕ್ತ ಪಂಕಜ್ಕುಮಾರ್ ಪಾಂಡೆ ತಿಳಿಸಿದರು.
‘ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಗೃಹನಿರ್ಬಂಧದ ಸಂದರ್ಭದಲ್ಲಿ ಅನುಸರಿಸಬೇಕಾದ ವಿಧಾನಗಳು ಸೇರಿದಂತೆ ಹಲವು ಮಾಹಿತಿಗಳು ದೊರೆಯಲಿವೆ. ತರಬೇತಿ ಪಡೆಯುವವರು ಈ ಚಾನಲ್ ಮೂಲಕ ಪ್ರಶ್ನೆಗಳನ್ನೂ ಕೇಳಲು ಅವಕಾಶ ಕಲ್ಪಿಸಿದ್ದೇವೆ. ಇದಕ್ಕಾಗಿ ನಿಗದಿತ ಸಮಯವನ್ನೂ ಮೀಸಲಿಡಲಾಗುವುದು’ ಎಂದರು.
ಈ ಚಾನಲ್ ಮೂಲಕ ನೂರು ಕಾರ್ಯಪಡೆ ತಂಡಗಳಿಗೆ ತರಬೇತಿ ನೀಡಲು ಇಲಾಖೆ ಯೋಜನೆ ರೂಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.