ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಸೋಂಕು ಪತ್ತೆ ಪ್ರಮಾಣ ಗಣನೀಯವಾಗಿ ಇಳಿಕೆ ಕಂಡಿರುವುದರಿಂದ ಕೋವಿಡ್ ಆರೈಕೆ ಕೇಂದ್ರಗಳ ಹಾಸಿಗೆಗಳು ಖಾಲಿ ಉಳಿಯುತ್ತಿವೆ. ಆರೈಕೆಯ ಜೊತೆಗೆ ಉಚಿತ ಊಟೋಪಾಚಾರಗಳನ್ನು ಒದಗಿಸಿದರೂ ಈ ಕೇಂದ್ರಗಳಿಗೆ ದಾಖಲಾಗಲು ಸೋಂಕಿತರು ನಿರಾಸಕ್ತಿ ತೋರಿಸುತ್ತಿದ್ದಾರೆ.
ಬಿಬಿಎಂಪಿ ಸೋಮವಾರ ಬಿಡುಗಡೆ ಮಾಡಿರುವ ಅಂಕಿ–ಅಂಶ ಪ್ರಕಾರ, ನಗರದಲ್ಲಿರುವ 56 ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಒಟ್ಟು 3,026 ಹಾಸಿಗೆಗಳಿವೆ. ಅವುಗಳಲ್ಲಿ 583 ಹಾಸಿಗೆಗಳಷ್ಟೇ ಭರ್ತಿ ಆಗಿವೆ. ಒಟ್ಟು 2,443 ಹಾಸಿಗೆಗಳು ಖಾಲಿ ಉಳಿದಿವೆ.
‘ಕೋವಿಡ್ ಆರೈಕೆ ಕೇಂದ್ರಗಳ ಸ್ಥಿತಿಯನ್ನು ಪರಿಶೀಲಿಸುತ್ತಿದ್ದೇವೆ. ಇವುಗಳ ಹಾಸಿಗೆಗಳ ಸಂಖ್ಯೆ ಕಡಿಮೆ ಮಾಡಲು ಚಿಂತನೆ ನಡೆದಿದೆ. ಎಲ್ಲ ಕೇಂದ್ರಗಳನ್ನು ಸ್ಥಗಿತಗೊಳಿಸಿ ಅಲ್ಲಿನ ಸೌಕರ್ಯಗಳನ್ನು ತೆರವುಗೊಳಿಸುವುದಿಲ್ಲ. ಕೆಲವೊಂದಷ್ಟನ್ನು ಉಳಿಸಿಕೊಳ್ಳುತ್ತೇವೆ. ಆದರೆ, ಈ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಶುಶ್ರೂಷಕರ ಹೊಣೆಗಳ ಮರುಹಂಚಿಕೆ ಮಾಡುವ ಅಗತ್ಯವಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
‘ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 16 ಚಿಕಿತ್ಸಾ ನಿರ್ಧಾರ ಕೇಂದ್ರಗಳಿವೆ (ಟ್ರಯಾಜ್ ಸೆಂಟರ್). ಇವುಗಳೆಲ್ಲವನ್ನೂ ಮುಂದುವರಿಸುತ್ತೇವೆ. ಅಲ್ಲಿನ ಸಿಬ್ಬಂದಿ ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ಈ ಕೇಂದ್ರಗಳಲ್ಲಿ ಸೋಂಕಿತರ ಆರೋಗ್ಯ ತಪಾಸಣೆ ನಡೆಸುವುದರ ಜೊತೆಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಕಾಯ್ದಿರಿಡುವ ಸವಲತ್ತು ಕೂಡಾ ಲಭ್ಯ. ಹಾಸಿಗೆ ಕಾಯ್ದಿರಿಸಲು ಈಗ ಸಹಾಯವಾಣಿಯನ್ನು (1912) ಸಂಪರ್ಕಿಸಬೇಕಾದ ಅಗತ್ಯವಿಲ್ಲ’ ಎಂದರು.
‘ಕೆಲವು ದಿನಗಳಿಂದ ನಗರದಲ್ಲಿ ಸೋಂಕು ಪತ್ತೆ ಪ್ರಮಾಣ 3 ಸಾವಿರಕ್ಕಿಂತ ಕಡಿಮೆ ಇದೆ. ಒಂದು ದಿನದ ಅಂಕಿ–ಅಂಶ ಪರಿಗಣಿಸಿ ನಿರ್ಧಾರಕ್ಕೆ ಬಂದರೆ ತಪ್ಪಾಗುತ್ತದೆ. ಏಳು ದಿನಗಳ ಸರಾಸರಿ ಆಧರಿಸಿ ನಿರ್ಣಯಕ್ಕೆ ಬರಬೇಕು. ವೈದ್ಯರು, ಶುಶ್ರೂಷಕಿಯರು, ಅರೆವೈದ್ಯಕೀಯ ಸಿಬ್ಬಂದಿ ಸಹಕಾರದಿಂದ ಇದು ಸಾಧ್ಯವಾಗಿದೆ’ ಎಂದರು.
‘ಪ್ರಕರಣಗಳು ಮತ್ತಷ್ಟು ಹೆಚ್ಚಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆಯನ್ನು ಮತ್ತಷ್ಟು ಕಡಿಮೆಗೊಳಿಸಲು ಶ್ರಮಿಸಬೇಕು. ಸುರಕ್ಷತಾ ಕ್ರಮಗಳನ್ನು ಕೈಬಿಡಲಾಗದು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವಿಕೆಯನ್ನು ಮುಂದುವರಿಸಬೇಕು’ ಎಂದು ಸ್ಪಷ್ಟಪಡಿಸಿದರು.
ಆಸ್ಪತ್ರೆಗಳಲ್ಲಿ 10 ಸಾವಿರ ಹಾಸಿಗೆ ಖಾಲಿ
ಎರಡು ವಾರ ಹಿಂದಿನವರೆಗೂ ನಗರದ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದಡಿ ಉಚಿತ ಚಿಕಿತ್ಸೆ ಪಡೆಯಲು ಹಾಸಿಗೆ ಕಾಯ್ದಿರಿಸಲು ಹರಸಾಹಸ ಪಡಬೇಕಾದ ಸ್ಥಿತಿ ಇತ್ತು. ಆದರೆ, ಸೋಮವಾರದ ಅಂಕಿ– ಅಂಶಗಳ ಪ್ರಕಾರ, ನಗರದಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದ 10,186 ಹಾಸಿಗೆಗಳು ಖಾಲಿ ಉಳಿದಿವೆ.
ನಗರದ ವಿವಿಧ ಆಸ್ಪತ್ರೆಗಳಲ್ಲಿ ಬಿಬಿಎಂಪಿ ವತಿಯಿಂದ ದಾಖಲಾಗುವ ಕೊರೋನಾ ಸೋಂಕಿತರಿಗೆ 13,506 ಹಾಸಿಗೆಗಳನ್ನು ಹಂಚಿಕೆ ಮಾಡಲಾಗಿದೆ. ಅವುಗಳಲ್ಲಿ 3,320 ಹಾಸಿಗೆಗಳು ಮಾತ್ರ ಪ್ರಸ್ತುತ ಬಳಕೆ ಆಗುತ್ತಿವೆ.
‘ಬಿಬಿಎಂಪಿ ವತಿಯಿಂದ ಚಿಕಿತ್ಸೆ ನೀಡಲು ಹಂಚಿಕೆಯಾದ ಹಾಸಿಗೆಗಳ ಸಂಖ್ಯೆಯನ್ನು ಕಡಿಮೆ ಮಾಡುವ ಬಗ್ಗೆ ಸಂಬಂಧಪಟ್ಟ ಸಚಿವರ ಜೊತೆ ಸಮಾಲೋಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಗೌರವ್ ಗುಪ್ತ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.