ಬೆಂಗಳೂರು: ನಗರದಲ್ಲಿ ಇಂದಿನಿಂದ ಲಾಕ್ಡೌನ್ ಭಾಗಶಃ ತೆರವಾಗಲಿದೆ. ಹೊರ ಜಿಲ್ಲೆಗಳಿಂದ ಹಾಗೂ ಹೊರರಾಜ್ಯಗಳಿಂದ ಬರುವವರು ತಮಗೆ ಕೋವಿಡ್ ಸೋಂಕು ಇಲ್ಲ ಎಂಬುದನ್ನು ದೃಢಪಡಿಸುವ ಪರೀಕ್ಷಾ ವರದಿಯನ್ನು ಹೊಂದಿರುವುದು ಕಡ್ಡಾಯವೇನಿಲ್ಲ ಎಂದು ಬಿಬಿಎಂಪಿ ಹೇಳಿದೆ.
ನಗರಕ್ಕೆ ಹೆಚ್ಚಿನ ಜನರು ಮರಳುವುದರಿಂದ ಕೋವಿಡ್ ಪರೀಕ್ಷೆಗಳ ಸಮಖ್ಯೆಯನ್ನು ಹೆಚ್ಚಿಸುವುದಕ್ಕೆ ಹಾಗೂ ಕೋವಿಡ್ ನಿಯಂತ್ರರಣ ನಿಯಮಗಳು ಕಡ್ಡಾಯವಾಗಿ ಪಾಲನೆ ಆಗುತ್ತಿರುವ ಬಗ್ಗೆ ಹೆಚ್ಚಿನ ನಿಗಾ ಇಡುವುದಕ್ಕೆ ಸಿದ್ಧತೆ ಮಾಡಿಕೊಂಡಿದೆ.
‘ನಗರಕ್ಕೆ ಬರುವವರು ಕೋವಿಡ್ ಪರೀಕ್ಷೆಯಲ್ಲಿ ಸೋಂಕು ಇಲ್ಲ ಎಂದು ದೃಢಪಟ್ಟ ವರದಿಯನ್ನು ತಮ್ಮ ಜೊತೆ ಹೊಂದಿರಬೇಕು ಎಂದು ಕಡ್ಡಾಯ ಮಾಡಿಲ್ಲ. ಆದರೆ, ರೈಲ್ವೆ ನಿಲ್ದಾಣಗಳು, ಬಸ್ನಿಲ್ದಾಣಗಳು ಹಾಗೂ ವಿಮಾನ ನಿಲ್ದಾಣದಲ್ಲಿ ಕೆಲವು ಪ್ರಯಾಣಿಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಿದ್ದೇವೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ‘ಪ್ರಜಾವಾಣಿ’ಗೆ ತಿಳಿಸಿದರು.
ಮಾರುಕಟ್ಟೆಗಳು ಬಂದ್:
‘ಕೆ.ಆರ್.ಮಾರುಕಟ್ಟೆಯೂ ಸೇರಿದಂತೆ ಹೆಚ್ಚು ಜನ ಸಂದಣಿಗೆ ಕಾರಣವಾಗುವ ಪ್ರಮುಖ ಮಾರುಕಟ್ಟೆಗಳು ಮುಚ್ಚಿರಲಿವೆ. ಸಾರ್ವಜನಿಕ ಪ್ರದೇಶದಲ್ಲಿ ಓಡಾಡುವವರು ಮಾಸ್ಕ್ ಧರಿಸುವುದು ಹಾಗೂ ಪರಸ್ಪರ ಅಂತರ ಕಾಪಾಡುವುದು ಕಡ್ಡಾಯ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.