ADVERTISEMENT

ಪಾದರಾಯನಪುರಕ್ಕೆ ಹೋಗಿದ್ದ ಪೊಲೀಸರಿಗೆ ಕೋವಿಡ್ ಪರೀಕ್ಷೆ

ಪಾದರಾಯನಪುರ ಸೋಂಕಿತರನ್ನು ಹಿಡಿಯಲು ಹೋಗಿದ್ದ ತಂಡ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 20:22 IST
Last Updated 24 ಏಪ್ರಿಲ್ 2020, 20:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಇಲ್ಲಿನ ಪಾದರಾಯನಪುರದಲ್ಲಿ ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಿ ಹಿಡಿದು ಜನರಿಂದ ಪ್ರತ್ಯೇಕಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪೊಲೀಸ್‌ಅಧಿಕಾರಿಗಳು ಮತ್ತು ಸಿಬ್ಬಂದಿ ಕೋವಿಡ್‌ ಪರೀಕ್ಷೆಗೆ ಮುಂದಾಗಿದ್ದಾರೆ.

ಸೋಮವಾರ, ಮಂಗಳವಾರ ಪಾದರಾಯನಪುರದಲ್ಲಿ 112 ಸೋಂಕಿತರನ್ನು ಪತ್ತೆ ಹಚ್ಚಿ ಪ್ರತ್ಯೇಕವಾಗಿ ಇಡಲು ಸಿಸಿಬಿ ಅಧಿಕಾರಿಗಳು ಸೇರಿದಂತೆ ದೊಡ್ಡ ಪೊಲೀಸರ ತಂಡವೇ ಹೋಗಿತ್ತು. ಆ ಸಮಯದಲ್ಲಿ ಅಲ್ಲಿ ದೊಡ್ಡ ಗಲಾಟೆಯೇ ನಡೆದಿತ್ತು.

ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಭಾಗಿವಹಿಸಿದ್ದ ಎಲ್ಲ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಗೂ ಕೋವಿಡ್‌ ಪರೀಕ್ಷೆ ಮಾಡಿಸಲಾಗುತ್ತಿದೆ. ಡಿಸಿಪಿಗಳಾದ ಅನುಚೇತ್‌, ರವಿಕುಮಾರ್‌ ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳಿಗೆ ನೆಗೆಟಿವ್‌ ಬಂದಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಎಸಿಪಿ ಒಬ್ಬರೂ ಸೇರಿದಂತೆ 27 ಮಂದಿ ಪೊಲೀಸ್‌ ಸಿಬ್ಬಂದಿ ಸೋಂಕಿತರ ಮನೆಗಳಿಗೆ ನುಗ್ಗಿ ಅವರನ್ನು ಎಳೆದು ತಂದಿದ್ದರು. ಈ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸಂಪೂರ್ಣ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ವೈದ್ಯಕೀಯ ವರದಿ ಬರುವುದು ಬಾಕಿ ಇದೆ ಎಂದೂ ಮೂಲಗಳು ಹೇಳಿವೆ.

ಪಾದರಾಯನಪುರದಲ್ಲಿ ಸೋಮವಾರ ರಾತ್ರಿ 80 ಮತ್ತು ಮಂಗಳವಾರ 32 ಮಂದಿಯನ್ನು ಹಿಡಿದು ತಂದು ಸಿಸಿಬಿಯಲ್ಲಿ ಇಡಲಾಗಿತ್ತು. ಬಳಿಕ ಅವರನ್ನು ಆಡುಗೋಡಿಯಲ್ಲಿರುವ ಮಂಗಳ ಕಲ್ಯಾಣ ಮಂಟಪಕ್ಕೆ ಕಳುಹಿಸಲಾಗಿತ್ತು. ಇನ್ನೂ 17 ಮಂದಿ ತಲೆಮರೆಸಿಕೊಂಡಿದ್ದಾರೆ. ಅವರನ್ನು ಹಿಡಿಯುವ ಪ್ರಯತ್ನವನ್ನು ಇಲಾಖೆ ಮುಂದುವರಿಸಿಲ್ಲ ಎಂದೂ ಗೊತ್ತಾಗಿದೆ.

ಸೋಂಕಿತರನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಯಾವುದೇ ಸಿಬ್ಬಂದಿಗೆ ಪಾಸಿಟಿವ್‌ ಬಂದ ಪಕ್ಷದಲ್ಲಿ ಸಿಸಿಬಿಯ ಎಲ್ಲ ಸಿಬ್ಬಂದಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವುದಾಗಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.