ಬೆಂಗಳೂರು: ಚಳಿಗಾಲದಲ್ಲಿ ಕೋವಿಡ್ ಹಬ್ಬುವಿಕೆ ಇನ್ನಷ್ಟು ಹೆಚ್ಚುವ ಆತಂಕವಿರುವುದರಿಂದ ಈ ರೋಗದ ನಿಯಂತ್ರಣ ಕ್ರಮಗಳ ಬಗ್ಗೆ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳುಗಳಲ್ಲಿ ತೀವ್ರ ಪ್ರಚಾರ ಅಭಿಯಾನ ಹಮ್ಮಿಕೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದೆ.
ಕೋವಿಡ್ ನಿಯಂತ್ರಣಕ್ಕಾಗಿ ಜಾರಿಗೊಳಿಸಿದ್ದ ಲಾಕ್ಡೌನ್ ಅನ್ನು ಹಂತ ಹಂತವಾಗಿ ಹಿಂಪಡೆಯಲಾಗಿದೆ. ಜನ ಹಿಂದಿನಂತೆ ದೈನಂದಿನ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ. ಮುಂಬರುವ ಚಳಿಗಾಲದ ಆರಂಭಿಕ ದಿನಗಳು ಕೋವಿಡ್ ನಿಯಂತ್ರಣದ ದೃಷ್ಟಿಯಿಂದ ಸವಾಲಿನಿಂದ ಕೂಡಿವೆ. ಈ ರೋಗ ನಿಯಂತ್ರಣ ಚಟುವಟಿಕೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಹೊಸ ಆಲೋಚನೆಗಳು ಹಾಗೂ ಕಾರ್ಯತಂತ್ರಗಳನ್ನು ಇಲಾಖೆ ಅಳವಡಿಸಿಕೊಳ್ಳುತ್ತಿದೆ. ಹಾಗಾಗಿ ಈ ಎರಡು ತಿಂಗಳುಗಳಲ್ಲಿ ವಿವಿಧ ಇಲಾಖೆಗಳನ್ನು ಬಳಸಿಕೊಂಡು ಕೇಂದ್ರೀಕೃತ ಪ್ರಚಾರ ಆಂದೋಲನಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರು ನಗರಾಭಿವೃದ್ದಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ಗೆ ಪತ್ರ ಬರೆದಿದ್ದಾರೆ.
ಕಸ ವಿಲೇವಾರಿ ವಾಹನಗಳ ಧ್ವನಿವರ್ಧಕಗಳಲ್ಲಿ ಕೋವಿಡ್ ಜಾಗೃತಿ ಸಂದೇಶ ಪಸರಿಸಬೇಕು. ದೀನದಯಾಳ್ ಉಪಾಧ್ಯಾಯ ನಗರ ಜೀವನೋಪಾಯ ಅಭಿಯಾನ ಕಾರ್ಯಕ್ರಮದ ಅಡಿ ರಚಿಸಲಾಗಿರುವ ಸ್ವಸಹಾಯ ಸಂಘ, ಬಡಾವಣೆಗಳ ಹಾಗೂ ವಿವಿಧ ಅಪಾರ್ಟ್ಮೆಂಟ್ ಸಮುಚ್ಚಯಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಮೂಲಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಸರ್ಕಾರಿ ವಸತಿ ಸಮುಚ್ಚಯಗಳಲ್ಲೂ ಭಿತ್ತಿಪತ್ರ ಪ್ರದರ್ಶನ ಹಾಗೂ ಪ್ರಚಾರ ಕಾರ್ಯಕ್ರಮಗಳ ಅನುಷ್ಠಾನಗೊಳಿಸಬೇಕು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.