ಬೆಂಗಳೂರು: ಕೋವಿಡ್ ಪರೀಕ್ಷೆಗೆ ಹೆಚ್ಚುವರಿಯಾಗಿ ಪಡೆದ ಹಣವನ್ನು ಪರೀಕ್ಷೆ ಮಾಡಿಸಿಕೊಂಡವರಿಗೆ ವಾಪಸ್ ನೀಡಬೇಕು ಎಂದು ವಿಕ್ರಮ್ ಆಸ್ಪತ್ರೆಗೆ ಅಧಿಕಾರಿಗಳ ತಂಡ ಸೂಚಿಸಿದೆ. ಇದಕ್ಕೆ ಆಸ್ಪತ್ರೆ ಕೂಡ ಸಮ್ಮತಿ ಸೂಚಿಸಿದೆ.
ನಗರದ ವಿಕ್ರಮ್ ಆಸ್ಪತ್ರೆಯಲ್ಲಿಕೋವಿಡ್ ಪರೀಕ್ಷೆಗೆ ಅಧಿಕ ಶುಲ್ಕ ಪಡೆಯಲಾಗುತ್ತಿದೆ ಎಂಬ ದೂರುಗಳು ಬಂದಿದ್ದರಿಂದ ಅಧಿಕಾರಿಗಳ ತಂಡ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿತು. ಐಎಎಸ್ ಅಧಿಕಾರಿಮೊಹಮದ್ ಮೊಹಿಸಿನ್ ಹಾಗೂ ಐಪಿಎಸ್ ಅಧಿಕಾರಿ ಪಿ.ಹರಿಶೇಖರನ್ ನೇತೃತ್ವದ ತಂಡ ಅಲ್ಲಿನ ವೈದ್ಯಾಧಿಕಾರಿಗಳಿಂದ ಈ ಬಗ್ಗೆ ಮಾಹಿತಿ ಪಡೆದುಕೊಂಡಿತು. ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ಅಧಿಕ ಹಣ ಪಡೆದಲ್ಲಿ ಕಟ್ಟುನಿಟ್ಟಾದ ಕ್ರಮಕೈಗೊಳ್ಳ
ಲಾಗುವುದು ಎಂದು ಎಚ್ಚರಿಸಿ, ಹೆಚ್ಚುವರಿ ಹಣವನ್ನು ಪರೀಕ್ಷೆ ಮಾಡಿಸಿಕೊಂಡವರಿಗೆ ವಾಪಸ್ ನೀಡುವಂತೆ ಅಧಿಕಾರಿಗಳು ಸೂಚಿಸಿದರು.
‘ಕೋವಿಡ್ ಪರೀಕ್ಷೆ ದರ ಇಳಿಕೆ ಮಾಡಿದ ಬಳಿಕವೂ ಆಸ್ಪತ್ರೆಯವರು ₹ 5,500 ಶುಲ್ಕವನ್ನು 44 ಮಂದಿಯಿಂದ ವಸೂಲಿ ಮಾಡಿರುವುದು ಗಮನಕ್ಕೆ ಬಂದಿದೆ. ಐಸಿಎಂಆರ್ ಹಾಗೂ ರಾಜ್ಯ ಸರ್ಕಾರ ನಿಗದಿಪಡಿಸಿದಷ್ಟು ದರವನ್ನು ಮಾತ್ರ ಪಡೆದು, ಉಳಿದ ಹಣವನ್ನು ಪರೀಕ್ಷೆ ಮಾಡಿಸಿಕೊಂಡವರಿಗೆ ವಾಪಸ್ ಮಾಡುವಂತೆ ಸೂಚಿಸಿದ್ದೇವೆ. ಅದಕ್ಕೆ ಆಸ್ಪತ್ರೆಯವರು ಕೂಡ ಒಪ್ಪಿದ್ದಾರೆ’ ಎಂದುಮೊಹಮದ್ ಮೊಹಿಸಿನ್ ತಿಳಿಸಿದರು.
ಸರ್ಕಾರದ ಸೂಚನೆಗೆ ಬದ್ಧ: ಈ ಬಗ್ಗೆ ಸ್ಪಷ್ಟನೆ ನೀಡಿರುವ ವಿಕ್ರಮ್ ಆಸ್ಪತ್ರೆ, ‘ಆರ್ಟಿಪಿಸಿಆರ್ ಪರೀಕ್ಷೆಯ ವರದಿ ಬರಲು 24ರಿಂದ 34 ಗಂಟೆಗಳು ಬೇಕಾಗುತ್ತವೆ ಎಂಬ ಕಾರಣಕ್ಕೆ ಸಿಬಿ–ನಾಟ್ ತಂತ್ರದ ಮೂಲಕ ಪರೀಕ್ಷೆ ಮಾಡಲಾಯಿತು. ಇದು ಆನುವಂಶಿಕ ಪರೀಕ್ಷಾ ವಿಧಾನವಾಗಿದ್ದು, 2 ಗಂಟೆಯಲ್ಲಿಯೇ ವರದಿ ನೀಡಲು ಸಾಧ್ಯವಾಗುತ್ತದೆ. ಪರೀಕ್ಷಾ ವಿಧಾನ ಮತ್ತು ಕಿಟ್ಗೆ ₹ 3,100ರ ಜತೆಗ ಸಾರಿಗೆ ಹಾಗೂ ವೈಯಕ್ತಿಕ ಸುರಕ್ಷತಾ ಸಾಧನಗಳಿಗೆ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ಹೀಗಾಗಿ ಶುಲ್ಕ ಹೆಚ್ಚಳವಾಗಿದೆ. ಇನ್ನು ಮುಂದೆ ಸರ್ಕಾರ ನಿಗದಿಪಡಿಸಿದ ದರವನ್ನೇ ಪಡೆಯಲಾಗುವುದು’ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.