ಬೆಂಗಳೂರು: ರಸ್ತೆಯಲ್ಲಿ ಹೋಗುತ್ತಿದ್ದಾಗ ರಾಕೆಟ್ (ಪಟಾಕಿ) ಬಂದು ಬಡಿದ ಕಾರಣ 28 ವರ್ಷದ ಯುವತಿ ನಾಗವೇಣಿ ಅವರ ಬಲಗಣ್ಣಿಗೆ ತೀವ್ರ ಗಾಯವಾಗಿದೆ.
‘ಸಿದ್ದಾಪುರದ ಬಳಿ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ಪಟಾಕಿ ಬಂದು ಕಣ್ಣಿಗೆ ಬಡಿಯಿತು. ವೈದ್ಯರು ಶುಕ್ರವಾರ, ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ’ ಎಂದು ನಾಗವೇಣಿ ಅವರ ಸಂಬಂಧಿ ಮಾಹಿತಿ ನೀಡಿದರು.
ಹೆಚ್ಚಿದ ಪ್ರಕರಣಗಳು: ಪಟಾಕಿಯಿಂದ ಗಾಯಗೊಂಡವರ ಸಂಖ್ಯೆ ಗುರುವಾರಕ್ಕೆ ಮತ್ತಷ್ಟು ಹೆಚ್ಚಿದೆ. ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಈವರೆಗೆ 26 ಮಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇದರಲ್ಲಿ ನಾಲ್ವರನ್ನು ದಾಖಲಿಸಿಕೊಳ್ಳಲಾಗಿದೆ. ಒಬ್ಬ ಬಾಲಕಿ ಶಾಶ್ವತವಾಗಿ ಒಂದು ಕಣ್ಣನ್ನು ಕಳೆದುಕೊಂಡಿದ್ದಾಳೆ.
ಮೋದಿ ಐ ಕೇರ್ನಲ್ಲಿ ಮೂವರು ಹಾಗೂ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಈವರೆಗೆ ನಾಲ್ಕು ಮಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ನಾರಾಯಣ ನೇತ್ರಾಲಯದಲ್ಲಿ 32 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಇದರಲ್ಲಿ 31 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಎರಡೂ ಕಣ್ಣಿಗೆ ಹಾನಿ: ನಾರಾಯಣ ನೇತ್ರಾಲಯದಲ್ಲಿ ದಾಖಲಾಗಿರುವ ಹೆಗ್ಗನಹಳ್ಳಿಯ 40 ವರ್ಷದ ವ್ಯಕ್ತಿಗೆ ಹೂವಿನಕುಂಡ ತಗುಲಿದ ಕಾರಣ ಎರಡೂ ಕಣ್ಣಿಗೆ ಗಾಯವಾಗಿದೆ. ‘ಎಡಭಾಗದ ಕಣ್ಣಿಗೆ ಹೆಚ್ಚು ಹಾನಿಯಾಗಿಲ್ಲ. ಆದರೆ ಬಲಗಡೆ ಕಣ್ಣಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾಗಬಹುದು’ ಎಂದು ವೈದ್ಯರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.