
ಬೆಂಗಳೂರು: ‘ಎಲ್ಲ ಕ್ಷೇತ್ರಗಳಲ್ಲೂ ಕಲೆ ಮತ್ತು ಸೃಜನಶೀಲತೆಯನ್ನು ಕಾಣಬಹುದು’ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದರು.
ಆರ್ಟ್ ಮಂತ್ರಂ ಟ್ರಸ್ಟ್ ಗುರುವಾರ ಆಯೋಜಿಸಿದ್ದ ಸೃಜನಶೀಲ ನಗರ ಬೆಂಗಳೂರು, ಸಂವಾದಗಳು ಮತ್ತು ಅನ್ವೇಷಣೆಗಳ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಸೃಜನಶೀಲ ನಗರವಾಗಿರುವ ಬೆಂಗಳೂರಿಗೆ ದೊಡ್ಡ ಇತಿಹಾಸ ಇದ್ದು, ಇದನ್ನು ಎಲ್ಲರಿಗೂ ತಿಳಿಸಬೇಕು. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (ಎನ್ಜಿಎಂಎ), ರೋರಿಕ್ ಎಸ್ಟೇಟ್ ಸೇರಿದಂತೆ ಹಲವಾರು ಪ್ರದೇಶಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಿವೆ. ನಗರದ ವಿವಿಧ ಪ್ರದೇಶಗಳಲ್ಲಿ ಎನ್ಜಿಒಗಳು ಆಯೋಜಿಸುವ ಪಾರಂಪರಿಕ ನಡಿಗೆಗಳ ಮೂಲಕ ನಗರದ ಇತಿಹಾಸವನ್ನು ತಿಳಿಸುವ ಕೆಲಸ ಮಾಡುತ್ತಿವೆ’ ಎಂದರು.
‘ನಗರದ ಸುಂದರ ಪ್ರದೇಶಗಳಿಗೆ ಭೇಟಿ ನೀಡಿ ಆಸ್ವಾದಿಸಬೇಕು. ನಮ್ಮ ಸುತ್ತಮುತ್ತ ಇರುವ ಪ್ರದೇಶವನ್ನು ಹೆಮ್ಮೆಯಿಂದ ನೋಡುವುದರ ಜೊತೆಗೆ ಅದನ್ನು ಸುಂದರಗೊಳಿಸಲು ಕೈಜೋಡಿಸಬೇಕು. ಸ್ಥಳೀಯ ಸಂಸ್ಕೃತಿಯನ್ನು ಹೆಚ್ಚು ಜನರಿಗೆ ತಲುಪಿಸಬೇಕು. ನಗರದಲ್ಲಿ ಹಲವಾರು ಜನ ಸೃಜನಾತ್ಮಕ ಕಲೆಗಳಲ್ಲಿ ತೊಡಗಿಸಿಕೊಂಡಿದ್ದು, ಅವರಿಗೆ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಸಹಾಯ ಕಲ್ಪಿಸಲಿವೆ’ ಎಂದು ಹೇಳಿದರು.
‘ನಗರದ ಜಂಕ್ಷನ್ಗಳು, ಪಾದಚಾರಿ ಮಾರ್ಗಗಳು, ಕೆಳಸೇತುವೆ, ಮೇಲ್ಸೇತುವೆ, ಬೃಹತ್ ಗೋಡೆಗಳ ಮೇಲೆ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಸೃಜನಾತ್ಮಕ ಕಲೆಗಳನ್ನು ಬಿತ್ತರಿಸಬೇಕು. ರಸ್ತೆ, ಪಾದಚಾರಿ ಮಾರ್ಗಗಳಲ್ಲಿ ಕಸ ಎಸೆಯದಂತೆ ಕಲಾಕೃತಿಗಳ ಮೂಲಕ ಜಾಗೃತಿ ಮೂಡಿಸಬೇಕು. ಇದರಲ್ಲಿ ಪ್ರತಿಯೊಬ್ಬರೂ ಭಾಗವಹಿಸುವಂತೆ ಯೋಜನೆಯನ್ನು ರೂಪಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.