ಬೆಂಗಳೂರು: ‘ಇಂಧನ ಸಂರಕ್ಷಣೆ ಹಾಗೂ ಇಂಧನ ದಕ್ಷತೆ ಮನೆಯಿಂದಲೇ ಆರಂಭವಾಗಬೇಕು’ ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ(ಕ್ರೆಡಲ್) ವ್ಯವಸ್ಥಾಪಕ ನಿರ್ದೇಶಕ ಕೆ.ಪಿ ರುದ್ರಪ್ಪಯ್ಯ ಸಲಹೆ ನೀಡಿದರು.
ನಗರದ ಕ್ರೆಡಲ್ ಕೇಂದ್ರ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ‘ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ’ಯಲ್ಲಿ, ಹೆಗ್ಗನಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಮನೆಯಲ್ಲಿ ಯಾರೂ ಇಲ್ಲದಾಗ ಫ್ಯಾನ್, ದೀಪ ಆರಿಸಬೇಕು. ಬಿಎಸ್ಇ 5 ಸ್ಟಾರ್ ರೇಟೆಡ್ನ ಎ.ಸಿ, ಫ್ರಿಜ್, ಫ್ಯಾನ್ ಹಾಗೂ ಇತರ ವಿದ್ಯುತ್ ಉಪಕರಣಗಳನ್ನು ಬಳಸಬೇಕು. ಆದಷ್ಟು ಸಮೂಹ ಸಾರಿಗೆ ಬಳಸಬೇಕು’ ಎಂದರು.
‘ಕೇಂದ್ರದ ಇಂಧನ ಸಚಿವಾಲಯದ 'ಇಂಧನ ದಕ್ಷತೆಯ ಬ್ಯೂರೊ' (ಬಿಇಇ), ದೇಶದಾದ್ಯಂತ ಇಂಧನ ಸಂರಕ್ಷಣಾ ಸಪ್ತಾಹ ಆಚರಿಸುತ್ತಿದೆ. ಸಪ್ತಾಹದಲ್ಲಿ ಇಂಧನ ಬಳಕೆಯ ಪ್ರಮಾಣ ತಗ್ಗಿಸುವುದು, ಇಂಧನದ ದಕ್ಷ ಬಳಕೆಯನ್ನು ಉತ್ತೇಜಿಸುವುದು ಮತ್ತು ರಾಜ್ಯದಲ್ಲಿ ಸುಸ್ಥಿರ ಪದ್ಧತಿಗಳನ್ನು ಬೆಳೆಸುವ ಬಗ್ಗೆ ಕ್ರೆಡಲ್ ಜಾಗೃತಿ ಮೂಡಿಸಲಿದೆ’ ಎಂದರು.
ಕಾರ್ಯಕ್ರಮದ ಅಂಗವಾಗಿ ಇಂಧನ ಸಂರಕ್ಷಣೆ ಕುರಿತು ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸ ಲಾಗಿತ್ತು. ಸ್ಪರ್ಧೆಯಲ್ಲಿ ಜಯಗಳಿಸಿದವರಿಗೆ ನಗದು ಬಹುಮಾನ ವಿತರಿಸಲಾಯಿತು. ಜೊತೆಗೆ ‘ಇಂಧನ ದಕ್ಷತೆಗಾಗಿ ಎಲ್ಇಡಿ ಬಲ್ಬ್ ಗಳನ್ನು ಬಳಸಬೇಕು’ ಎಂಬ ಸಂದೇಶ ಸಾರಲು ವಿದ್ಯಾರ್ಥಿಗಳಿಗೆ ಎಲ್ಇಡಿ ಬಲ್ಬ್ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.