ಬೆಂಗಳೂರು: ವನ್ಯಜೀವಿಗಳ ಉಗುರು ಹಾಗೂ ಚರ್ಮ ಮಾರಾಟ ಮಾಡುತ್ತಿದ್ದ ಆರೋಪದಡಿ ಮಹಿಳೆ ಸೇರಿ ನಾಲ್ವರನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ಪ್ರಮೀಳಾ (40), ಸಾಯಿ ಕುಮಾರ್ (22), ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿ. ಕಾರ್ತಿಕ್ ಕುಮಾರ್ (40) ಹಾಗೂ ವಿ. ಪ್ರಶಾಂತ್ (28) ಬಂಧಿತರು. ಹುಲಿಯ 6 ಉಗುರು, ಚಿಪ್ಪು ಹಂದಿಯ 7, ಕರಡಿಯ 3, ಚಿರತೆಯ 400 ಉಗುರುಗಳು, ನರಿಯ ಚರ್ಮ ಹಾಗೂ ತಲೆಬುರುಡೆ, ಕೃಷ್ಣಮೃಗ ಚರ್ಮ, ಕಾಡು ಬೆಕ್ಕಿನ ಎರಡು ಪಂಜಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಶನಿವಾರ ಬೆಳಿಗ್ಗೆ ಬನಶಂಕರಿ 3ನೇ ಹಂತದ ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿರುವ ಬಸ್ ತಂಗುದಾಣದ ಬಳಿ ಆರೋಪಿಗಳು ನಿಂತಿದ್ದರು. ಅವರ ಬಳಿ ಶಾಲಾ ಬ್ಯಾಗ್ಗಳು ಇದ್ದವು. ಬಾತ್ಮಿದಾರರು ನೀಡಿದ್ದ ಮಾಹಿತಿ ಆಧರಿಸಿ ದಾಳಿ ಮಾಡಿದಾಗ, ಅವರಲ್ಲಿದ್ದ ಬ್ಯಾಗ್ಗಳಲ್ಲಿ ವನ್ಯಜೀವಿಗಳ ಉಗುರು ಹಾಗೂ ಚರ್ಮ ಪತ್ತೆಯಾಯಿತು’ ಎಂದೂ ತಿಳಿಸಿದರು.
‘ಆರೋಪಿಗಳು ಆಂಧ್ರಪ್ರದೇಶದಿಂದ ಉಗುರು ಹಾಗೂ ಚರ್ಮಗಳನ್ನು ತಂದಿದ್ದರು. ಚಿನ್ನಾಭರಣಗಳಲ್ಲಿ ವನ್ಯಜೀವಿಗಳ ಉಗುರು ಅಳವಡಿಸಿ ಮಾರಾಟ ಮಾಡುವ ವ್ಯಾಪಾರಿಯೊಬ್ಬರು, ಆರೋಪಿಗಳನ್ನು ಸಂಪರ್ಕಿಸಿದ್ದರೆಂದು ಗೊತ್ತಾಗಿದೆ. ಆದರೆ, ಆ ವ್ಯಾಪಾರಿ ಯಾರು ಎಂಬುದು ಗೊತ್ತಾಗಿಲ್ಲ’ ಎಂದೂ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.